ಜಮಖಂಡಿ: ಶೈಕ್ಷಣಿಕ ಸಂಸ್ಥೆಗಳು, ಕೈಗಾರಿಕೆಗಳು, ಆಸ್ಪತ್ರೆಗಳು ಸೇರಿದಂತೆ ಇಡೀ ವ್ಯವಸ್ಥೆಯ ಕಠಿಣ ಪರಿಶ್ರಮದ ನಿಜವಾದ ಪ್ರಭಾವ ಭಾರತೀಯ ಸೇನೆಯ ಕಾರ್ಯ ವೈಖರಿಯಲ್ಲಿ ಪ್ರತಿಫಲಿ ಸುತ್ತದೆ ಎಂದು ಭಾರತೀಯ ಸೇನೆಯ ಉಪಮುಖ್ಯಸ್ಥ (ಮಾಹಿತಿ ವ್ಯವಸ್ಥೆ ಮತ್ತು ತರಬೇತಿ) ಲೆ.ಜನರಲ್ ರಮೇಶ ಹಲಗಲಿ ಅಭಿಪ್ರಾಯಪಟ್ಟರು.
ಭಾರತೀಯ ಸೇನೆಯ ಉಪ ಮುಖ್ಯಸ್ಥರ ಹುದ್ದೆಗೆ ಬಡ್ತಿ ಪಡೆದ ಪ್ರಯುಕ್ತ ಬಿಎಲ್ಡಿ ಶಿಕ್ಷಣ ಸಂಸ್ಥೆಯ ವಾಣಿಜ್ಯ, ಬಿಎಚ್ಎಸ್ ಕಲೆ ಮತ್ತು ಟಿಜಿಪಿ ವಿಜ್ಞಾನ ಕಾಲೇಜು ಇಲ್ಲಿನ ಐತಿಹಾಸಿಕ ದರ್ಬಾರ್ ಹಾಲ್ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇಡೀ ದೇಶದಾದ್ಯಂತ ಯುವಕರಲ್ಲಿ ಸ್ಪರ್ಧಾ ಮನೋಭಾವ ಆವಿಷ್ಕಾರ ಗೊಳ್ಳುತ್ತಿದೆ. ಇಂತಹ ಬದಲಾದ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ವಿಶ್ವಾಸಾರ್ಹತೆ, ಕಾರ್ಯ ನಿರ್ವಹಣಾ ಸಾಮರ್ಥ್ಯ, ಜಾಣತನ ಮತ್ತು ಒತ್ತಡ ಸಹಿಸುವ ಶಕ್ತಿಯನ್ನು ಮೈಗೂಡಿಸಿ ಕೊಳ್ಳಬೇಕು. ಅಂದಾಗ ಮಾತ್ರ ಬೆಳವಣಿಗೆ ಸಾಧ್ಯ ಎಂದು ವಿದ್ಯಾರ್ಥಿ ಗಳಿಗೆ ಕಿವಿಮಾತು ಹೇಳಿದರು.
ವಿಜಾಪುರದ ಬಿಎಲ್ಡಿ ವಿಶ್ವವಿದ್ಯಾಲಯ ಕುಲಪತಿ ಡಾ.ಬಿ.ಜಿ. ಮೂಲಿಮನಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಅರುಣಕುಮಾರ ಶಹಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿಎಲ್ಡಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ಎಸ್.ಎಚ್. ಲಗಳಿ ಅವರು ಬಿನ್ನವತ್ತಳೆ ಓದಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಡಾ.ಜಿ.ವಿ.ಉದಪುಡಿ ಅಭಿನಂದನಾಪರ ಮಾತುಗಳನ್ನು ಹೇಳಿದರು. ಆಡಳಿತಾಧಿಕಾರಿ ಪ್ರೊ.ಕೆ.ಎಸ್. ಬಿರಾದಾರ ವೇದಿಕೆಯಲ್ಲಿದ್ದರು.
ಪ್ರಾಚಾರ್ಯ ಡಾ.ಎಸ್.ಎಸ್. ಸುವರ್ಣಖಂಡಿ ಸ್ವಾಗತಿಸಿದರು. ಡಾ.ಬಿ.ಬಿ. ಶಿರಡೋಣಿ, ಪ್ರೊ.ಎಸ್. ಬಿ.ಕಮತಿ ನಿರೂಪಿಸಿದರು. ಡಾ.ಟಿ.ಪಿ.ಗಿರಡ್ಡಿ ವಂದಿಸಿದರು.