ಹೈದರಾಬಾದ್: ಎಮ್ಮಾರ್ ಹಗರಣ, ಜಗನ್ ಅಕ್ರಮ ಆಸ್ತಿ ಪ್ರಕರಣದ ಸುಳಿಯಲ್ಲಿ ಸಿಲುಕಿರುವ ಆಂಧ್ರ ಪ್ರದೇಶದ ಆಡಳಿತಶಾಹಿ ಇದೀಗ ಲೈಂಗಿಕ ಹಗರಣದಿಂದಾಗಿ ಸುದ್ದಿಯಾಗುತ್ತಿದೆ.
1985ರ ತಂಡದ ಐಎಎಸ್ ಅಧಿಕಾರಿ, ಹೈದರಾಬಾದ್ ಪ್ರಾಂತ್ಯದ `ಆಧಾರ್~ ಯೋಜನೆಯ ಉಪ ಮಹಾನಿರ್ದೇಶಕ ವಿ.ಎಸ್.ಭಾಸ್ಕರ್ ಅವರು ಕಿರಿಯ ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಕಂದಾಯ ಸೇವೆ ಅಧಿಕಾರಿ ಎಸ್. ಪದ್ಮಜಾ ಅವರು ಈ ಸಂಬಂಧ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯ (ಕ್ಯಾಟ್) ಹೈದರಾಬಾದ್ ಪೀಠಕ್ಕೆ ದೂರು ಸಲ್ಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನ್ಯಾಯಮಂಡಳಿಯು ಭಾಸ್ಕರ್ ಅವರನ್ನು ಇದೇ ತಿಂಗಳ ಮೂರರಂದು ಅವರ ತವರು ರಾಜ್ಯವಾದ ಅಸ್ಸಾಂಗೆ ವರ್ಗಾವಣೆ ಮಾಡಿ ಆದೇಶ ನೀಡಿದೆ. `ಭಾಸ್ಕರ್ ಅವರು ಕಳೆದ 6 ತಿಂಗಳಿನಿಂದ ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ ಲೈಂಗಿಕ ಶೋಷಣೆಗೂ ಯತ್ನಿಸಿದ್ದಾರೆ. ಈ ಸಂಬಂಧ ನಾನು ಸರ್ಕಾರಿ ಮಟ್ಟದಲ್ಲಿ ಹಲವಾರು ಸಂಸ್ಥೆಗಳಿಗೆ ದೂರು ನೀಡಿದರೂ ಪ್ರಯೋಜನವಾಗಲಿಲ್ಲ~ ಎಂದು ಪದ್ಮಜಾ ದೂರಿದ್ದಾರೆ.
ಯಾರೂ ತಮ್ಮ ದೂರಿಗೆ ಸ್ಪಂದಿಸದ ಕಾರಣ ಪದ್ಮಜಾ ಕೊನೆಗೆ ಆಡಳಿತ ನ್ಯಾಯಮಂಡಳಿ ಮೊರೆ ಹೋದರು.
ಭಾಸ್ಕರ್ ಅಲ್ಲಿಯೂ ತಮ್ಮ ಪ್ರಭಾವ ಬೀರಲು ಯತ್ನಿಸಿದರು. ಆದರೆ ಪದ್ಮಜಾ ನೀಡಿದ ಪುರಾವೆಗಳ ಹಿನ್ನೆಲೆಯಲ್ಲಿ ಭಾಸ್ಕರ್ ಪ್ರಯತ್ನ ಫಲಿಸಲಿಲ್ಲ ಎಂದು ಹೇಳಲಾಗಿದೆ. ಇನ್ನೊಂದೆಡೆ ಭಾಸ್ಕರ್ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವರ್ಗಾವಣೆ ಆದೇಶವನ್ನು ಪ್ರಶ್ನಿಸಿ ಆಂಧ್ರ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಅನುಕಂಪ ಗಿಟ್ಟಿಸಿಕೊಳ್ಳಲು ಹಾಗೂ ತಮ್ಮ ಹುದ್ದೆಯ ಲಾಭ ಪಡೆದುಕೊಳ್ಳಲು ಪದ್ಮಜಾ ಈ ಆರೋಪ ಮಾಡಿದ್ದಾರೆ ಎಂದು ದೂರಿದ್ದಾರೆ. ಭಾಸ್ಕರ್ ಅರ್ಜಿ ವಿಚಾರಣೆ ಬುಧವಾರ ನಡೆಯಲಿದೆ. ಇಂಥದ್ದೇ ಪ್ರಕರಣವೊಂದರಲ್ಲಿ ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರವು ಕಾರ್ಮಿಕ ಕಲ್ಯಾಣ ಆಯುಕ್ತ ಮೋಹನ್ ಧೋತ್ರೆ ಅವರನ್ನು ವಜಾ ಮಾಡಿತ್ತು.