ತುಮಕೂರು: ಪ್ರಬಲ ಹಾಗೂ ಪರಿಣಾಮಕಾರಿ ಲೋಕಪಾಲ ಮಸೂದೆ ಜಾರಿ ಮಾಡುವಂತೆ ಹಾಗೂ ಬೆಲೆ ಏರಿಕೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಸಿಪಿಐ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.
ಧರಣಿ ನಿರತನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ ಕಂಬೇಗೌಡ, ಪ್ರಸಕ್ತ ಚಳಿಗಾಲದ ಅಧಿವೇಶನದಲ್ಲೇ ಲೋಕಪಾಲ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಬೇಕು. ಬೆಲೆ ಏರಿಕೆ ನಿಯಂತ್ರಿಸಿ ಜನ ಸಾಮಾನ್ಯರ ಕೈಗೆಟಕುವ ದರದಲ್ಲಿ ಅಗತ್ಯ ವಸ್ತುಗಳು ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಗಣಿಗಾರಿಕೆ ಕುರಿತು ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ನೀಡಿರುವ ವರದಿಯನ್ನು ಜಾರಿ ಮಾಡಬೇಕು. ಸರ್ಕಾರಿ ಜಾಗದ ಅತಿಕ್ರಮಣ ಕುರಿತು ನ್ಯಾಯಮೂರ್ತಿ ಬಾಲಸುಬ್ರಹ್ಮಣ್ಯ ವರದಿಯ ಅನುಷ್ಠಾನವಾಗಬೇಕು. ಇಡಿ ಜಿಲ್ಲೆಯನ್ನು ಸಂಪೂರ್ಣ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸುವುದರ ಜೊತೆಗೆ, ಜಿಲ್ಲೆಯ ಬೇಸಾಯ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಎನ್.ಶಿವಣ್ಣ, ಗಿರೀಶ್, ಟಿ.ಆರ್.ರೇವಣ್ಣ, ವೀರದಾಸಣ್ಣ, ಬೋಳರಂಗಪ್ಪ, ಚಿಣ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.