ಗುನಾ (ಮಧ್ಯಪ್ರದೇಶ) (ಪಿಟಿಐ): ಪ್ರಧಾನಮಂತ್ರಿ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಲೋಕಪಾಲ ವ್ಯಾಪ್ತಿಯಡಿ ತರಬೇಕು ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಮಂಗಳವಾರ ಅಭಿಪ್ರಾಯ ಪಟ್ಟಿದ್ದಾರೆ.
ರಾಘೋಗಡದಲ್ಲಿ ಶನಿವಾರ ಸಂಜೆ ವರದಿಗಾರರ ಜತೆ ಮಾತನಾಡಿದ ಅವರು `ನನ್ನ ದೃಷ್ಟಿಯಲ್ಲಿ ಪ್ರಧಾನಿ, ನ್ಯಾಯಾಂಗ ವ್ಯವಸ್ಥೆ, ಎನ್ಜಿಒಗಳು ಮತ್ತು ಕೈಗಾರಿಕಾ ಘಟಕಗಳನ್ನು ಕೂಡ ಲೋಕಪಾಲ್ ವ್ಯಾಪ್ತಿಯಡಿ ತರಬೇಕು. ಆದರೆ ಲೋಕಪಾಲ ತನ್ನ ಅಧಿಕಾರ ದುರುಪಯೋಗ ಪಡಿಸಿಕೊಳ್ಳದೇ ಇರುವುದನ್ನು ಖಚಿತಪಡಿಸಬೇಕು~ ಎಂದಿದ್ದಾರೆ.
`ನಾನು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಸಿಎಂ ಹುದ್ದೆಯನ್ನು ಲೋಕಾಯುಕ್ತ ವ್ಯಾಪ್ತಿಯಡಿಗೆ ತಂದಿದ್ದೆ~ ಎಂದಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲವು ವ್ಯಕ್ತಿಗಳು ಸರ್ಕಾರ ಮೇಲೆ `ಒತ್ತಡ ಹೇರುವುದು~ ಸರಿಯಲ್ಲ ಎಂದು ಅವರು ಅಣ್ಣಾ ಹಜಾರೆಯಂತಹ ನಾಗರಿಕ ಹಕ್ಕು ಕಾರ್ಯಕರ್ತರ ಬಗ್ಗೆ ಹೇಳಿದ್ದಾರೆ.
ಉಮಾಭಾರತಿ ಬಿಜೆಪಿಗೆ ಮರಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ಅವರಿಗೆ ಅವರು `ದೊಡ್ಡ ಸವಾಲು~ ಒಡ್ಡಲಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
`ಉಮಾ ದ್ವೇಷವನ್ನು ಪೋಷಿಸುತ್ತಾರೆ. ಆದ್ದರಿಂದಲೇ ಅವರು ಚೌಹಾಣ್ಗೆ ದೊಡ್ಡ ಬೆದರಿಕೆ ಇದ್ದಂತೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಸ್ಥಾನದಿಂದ ತಮ್ಮನ್ನು ಹೊರ ಹಾಕಿದದವರನ್ನು ಆಕೆ ಮರೆಯುವುದಿಲ್ಲ~ ಎಂದಿದ್ದಾರೆ.
ಭೋಪಾಲ್ನಲ್ಲಿನ ತಮ್ಮ ಮನೆ ಮೇಲೆ ಕಲ್ಲು ತೂರಾಟ ನಡೆದ ಘಟನೆಗೆ ಸಂಬಂಧಿಸಿದಂತೆ ಅವರು, `ಬಲಪಂಥೀಯ ಹಿಂದೂ ಮೂಲಭೂತವಾದಿಗಳು ತಮ್ಮ ಸ್ಥಳಕ್ಕೆ ಬಾಂಬ್ ಎಸೆಯಬಹುದು ಎಂಬ ಭೀತಿ ಇದೆ. ನನ್ನ ರಕ್ಷಣೆಯನ್ನು ದೇವರಿಗೆ ಬಿಟ್ಟಿದ್ದೇನೆ~ ಎಂದೂ ಸಿಂಗ್ ಹೇಳಿದ್ದಾರೆ.