ಹಾನಗಲ್: ಜಮೀನುಗಳ ಖಾತೆ ಬದಲಾವಣೆಗೆ ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಹಣದ ಬೇಡಿಕೆ ಇಟ್ಟಿದ್ದ ಹಾನಗಲ್ ತಾಲ್ಲೂಕಿನ ನರೇಗಲ್ ಗ್ರಾಮ ಲೆಕ್ಕಾಧಿಕಾರಿ ಚಂದ್ರಶೇಖರ ನಾಗಪ್ಪ ಪೂಜಾರ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಗುರುವಾರ ಸಂಜೆ ನಡೆದಿದೆ.
ತಾಲ್ಲೂಕಿನ ಕೂಡಲ ಗ್ರಾಮದ ಅಶೋಕ ಸಂಗಪ್ಪ ಗುಡ್ಡಪ್ಪನವರ ನೀಡಿದ ದೂರಿನ ಅನ್ವಯ ಲೋಕಾಯುಕ್ತ ಪೋಲಿಸರು ದಾಳಿ ನಡೆಸಿದ್ದಾರೆ. 15 ದಿನಗಳ ಹಿಂದೆ ಅಣ್ಣ ತಮ್ಮಂದಿರ ಮಕ್ಕಳಾದ ಅಶೋಕ, ಪ್ರವೀಣ ಮತ್ತು ಶರಣಪ್ಪ ಅವರು ಮರಣ ಹೊಂದಿರುವ ತಮ್ಮ ತಂದೆಯ ಹೆಸರು ಕಡಿಮೆ ಮಾಡಿ ತಮ್ಮ ಹೆಸರನ್ನು ನರೇಗಲ್ ಹದ್ದಿನಲ್ಲಿರುವ ಜಮೀನುಗಳ ಖಾತೆಗೆ ಸೇರಿಸಲು ಅಗತ್ಯ ದಾಖಲೆಗಳನ್ನು ಗ್ರಾಮ ಲೆಕ್ಕಾಧಿಕಾರಿ ಬಳಿಗೆ ಒದಗಿಸಿದ್ದರು.
ಪ್ರತಿ ಖಾತೆ ಬದಲಾವಣೆಗೆ ₨35 ಶುಲ್ಕ. ಆದರೆ ರೂ. 3 ಸಾವಿರದಂತೆ ಒಟ್ಟು ರೂ. 9 ಸಾವಿರ ಬೇಡಿಕೆಯನ್ನು ಗ್ರಾಮ ಲೆಕ್ಕಾಧಿಕಾರಿ ಚಂದ್ರಶೇಖರ ಇಟ್ಟಿದ್ದರು. ಜ.7 ರಂದು ಲೋಕಾಯುಕ್ತರಿಗೆ ಈ ಲಂಚದ ಮಾಹಿತಿ ನೀಡಿಲಾಗಿತ್ತು. ಗುರುವಾರ ಸಂಜೆ ಇಲ್ಲಿನ ಕೃಷ್ಣ ಭವನದಲ್ಲಿ ದೂರುದಾರರಿಂದ ಲಂಚ ಸ್ವೀಕರಿಸುತ್ತಿರುವ ಸಮಯದಲ್ಲಿ ದಾಳಿ ನಡೆಸಿ ಗ್ರಾಮ ಲೆಕ್ಕಾಧಿಕಾರಿಯನ್ನು ಬಂಧಿಸಲಾಗಿದೆ ಎಂದು ದಾಳಿಯ ನೇತೃತ್ವ ವಹಿಸಿದ್ದ ಹಾವೇರಿ ಲೋಕಾಯುಕ್ತ ಡಿಎಸ್ಪಿ ನಾಗರಾಜ ಅಂಬಲಿ ತಿಳಿಸಿದ್ದಾರೆ.
ಲೋಕಾಯುಕ್ತ ಸಿಬ್ಬಂಧಿ ಐ.ಎಚ್.ಉಪ್ಪಾರ, ಎಂ.ಡಿ.ಹಿರೇಮಠ, ಪಿ.ಆರ್.ಬಾವಿಕಟ್ಟಿ. ಡಿ.ಎಸ್.ಬಿಲ್ಲರ್, ಕೆ.ಎಂ.ಹಿರೇಮಠ, ಎಸ್.ಎನ್. ಹಿರೇಮಠ ಸೇರಿದಂತೆ ದಾವಣಗೇರೆ ಲೋಕಾಯುಕ್ತ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.