ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಖಾಸಗಿ ದೂರು ದಾಖಲಿಸಿದ್ದ ವಕೀಲ ಸಿರಾಜಿನ್ ಬಾಷಾ ಅವರ ವಿರುದ್ಧ ನಗರದ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಾಗಿದೆ.
ವಕೀಲ ಸಿರಾಜಿನ್ ಬಾಷಾ ಅವರು ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಗಜೇಂದ್ರ ಎಂಬುವರು ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 193 (ಸುಳ್ಳು ಸಾಕ್ಷ್ಯ ನೀಡುವುದು) ಮತ್ತು 466 (ಫೋರ್ಜರಿ ಮಾಡಿದ ದಾಖಲೆ ಒದಗಿಸುವುದು) ಅನ್ವಯ ಸಿರಾಜಿನ್ ಬಾಷಾ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹಲಸೂರುಗೇಟ್ ಠಾಣೆಯ ಇನ್ಸ್ಪೆಕ್ಟರ್ ಎಚ್.ಎಸ್. ಪರಮೇಶ್ವರ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.
ಮಾರತ್ಹಳ್ಳಿಯ ವಿಭೂತಿಪುರದ ನಿವಾಸಿಯಾದ ಗಜೇಂದ್ರ ಅವರು 6ನೇ ಎಸಿಎಂಎಂ ನ್ಯಾಯಾಲಯದಲ್ಲಿ ಬಾಷಾ ಅವರ ವಿರುದ್ಧ ಖಾಸಗಿ ಮೊಕದ್ದಮೆ ದಾಖಲಿಸಿದ್ದರು. ಯಡಿಯೂರಪ್ಪ ಅವರ ವಿರುದ್ಧ ಎರಡನೇ ಖಾಸಗಿ ದೂರು ದಾಖಲಿಸಿರುವ ಬಾಷಾ ಅವರು ಸುಳ್ಳು ಸಾಕ್ಷ್ಯ ನೀಡಿದ್ದಾರೆ ಮತ್ತು ಫೋರ್ಜರಿ ಮಾಡಿದ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಿದ್ದಾರೆ. ಆದ್ದರಿಂದ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಅವರು ಮನವಿ ಮಾಡಿದ್ದರು.
ಖಾಸಗಿ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣ ದಾಖಲಿಸುವಂತೆ ಆದೇಶ ನೀಡಿದೆ.
ಎರಡನೇ ದೂರು ಸಲ್ಲಿಸಿರುವ ಬಾಷಾ ಅವರು ದೂರಿನ 7ನೇ ಪ್ಯಾರಾದಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ. ಅರ್ಕಾವತಿ ಲೇಔಟ್ನಲ್ಲಿ 28,600 ನಿವೇಶನ ನಿರ್ಮಾಣ ಮಾಡಲಾಗುತ್ತಿದೆ.
ಆದರೆ ಅವರು ಇಪ್ಪತ್ತು ಸಾವಿರ ಎಂದು ನಮೂದಿಸಿದ್ದಾರೆ. ಬಡಾವಣೆಗೆ ಸಂಬಂಧಿಸಿದಂತೆ ಹೈಕೋರ್ಟ್ನ ವಿಭಾಗೀಯ ಪೀಠದಲ್ಲಿ ಪ್ರಕರಣ ಇದ್ದರೂ ಯಾವುದೇ ತಕರಾರು ಇಲ್ಲ ಎಂಬ ತಪ್ಪು ಮಾಹಿತಿ ನೀಡಿದ್ದಾರೆ. ವಕೀಲರಾಗಿರುವ ಅವರಿಗೆ ಎಲ್ಲ ಮಾಹಿತಿ ಇದ್ದರೂ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ದೂರಿನಲ್ಲಿ ಗಜೇಂದ್ರ ಅವರು ದೂರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.