ನೆಲಮಂಗಲ: ಋಷಿ ಮುನಿಗಳು, ಸಿದ್ಧ ಪುರುಷರು ನೀಡುವ ವನೌಷಧಿಗಳಿಂದ ಕಾಯಿಲೆಗಳು ಸಂಪೂರ್ಣ ಗುಣವಾಗುತ್ತವೆ. ಅಲ್ಲದೆ, ಅಂತಹ ಔಷಧಿಗಳು ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ಔಷಧಿ ವಿತರಣೆಯ ಸಂಚಾಲಕ ಸುರೇಂದ್ರನಾಥ್ ತಿಳಿಸಿದರು.
ತಾಲ್ಲೂಕಿನ ವನಕಲ್ಲು ಮಲ್ಲೇಶ್ವರದ ಸಿದ್ದಯೋಗಾನಂದ ಸ್ವಾಮೀಜಿ ಸಂಕಲ್ಪದಂತೆ ತ್ಯಾಮಗೊಂಡ್ಲುವಿನ ಶಾರದಾ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಅಸ್ತಮಾ, ಶೀತ, ಅಲರ್ಜಿ ಔಷಧಿಗಳ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಡಾ.ರೇವಣ ಸಿದ್ದೇಶ್ವರ ಕುಂಠಿಮಠ, ವಾಸುದೇವಮೂರ್ತಿ ಹಾಗೂ ಬಾಲಾಜಿ ಔಷಧಿ ಮಹತ್ವ ಕುರಿತು ವಿವರಿಸಿದರು. ಪ್ರಕೃತಿಯ ವಿಸ್ಮಯಗಳನ್ನು ಕುರಿತು ಪರಿಸರವಾದಿ ಗುರುದೇವ್ ಸಚಿತ್ರಗಳ ಪ್ರದರ್ಶನದೊಂದಿಗೆ ಉಪನ್ಯಾಸ ನೀಡಿದರು.
ರಾಜ್ಯದ ವಿವಿಧ ಮೂಲೆಗಳಿಂದ ಮತ್ತು ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರಗಳಿಂದಲೂ ನೂರಾರು ಜನ ಆಗಮಿಸಿ ಔಷಧಿ ಸ್ವೀಕರಿಸಿದರು.ಸ್ಥಳೀಯ ವರಮಹಾಲಕ್ಷ್ಮಿ ಸೇವಾ ಸಮಿತಿ, ವಾಸವಿ ಸಂಘದ ವತಿಯಿಂದ ದೂರದ ಊರುಗಳಿಂದ ಬಂದವರಿಗೆ ಊಟ-ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು.
ಪ್ರತಿಭಾ ಪುರಸ್ಕಾರ
ಅಖಿಲ ಭಾರತ ವೀರಶೈವ ಮಹಾಸಭಾ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶನಿವಾರ ನೆಲಮಂಗಲ ತಾಲ್ಲೂಕು ಕವಾಡಿ ಮಠದ ರುದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಏರ್ಪಡಿಸಿದೆ.
ವಿದ್ಯಾರ್ಥಿಗಳು ಅರ್ಜಿಯೊಂದಿಗೆ ನಕಲು ಅಂಕ ಪಟ್ಟಿ ಲಗತ್ತಿಸಿ ನೆಲಮಂಗಲ ತಾಲ್ಲೂಕು ವೀರಶೈವ ಯುವಕ ಸಂಘ, ರುದ್ರೇಶ್ವರ ಸ್ವಾಮಿ ಸೇವಾ ಸಮಿತಿ, ಪೇಟೆ ಬೀದಿ, ನೆಲಮಂಗಲ- ಇಲ್ಲಿಗೆ ಕಳಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಮೊ: 9886304446/ 9342558455.