ಕೊಳ್ಳೇಗಾಲ: ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ತಮಿಳುನಾಡಿಗೆ ಪರಾರಿಯಾಗಿದ್ದ ಆರೋಪಿಗಳನ್ನು ತಾಲ್ಲೂಕಿನ ಹನೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಂ.ಟಿ.ದೊಡ್ಡಿ ವಾಸಿ ಗಿರಿಗೌಡ ಹಾಗೂ ಆತನ ಪುತ್ರ ದೇವರಾಜು ಎಂಬುವವರೇ ಬಂಧಿತ ಆರೋಪಿಗಳು. ಕೊಳ್ಳೇಗಾಲ ತಾಲ್ಲೂಕಿನ ಭದ್ರಯ್ಯನಹಳ್ಳಿ ಸುಧಾ (26) ಅವರನ್ನು ಇದೇ ತಾಲ್ಲೂಕಿನ ಎಂ.ಟಿ.ದೊಡ್ಡಿ ನಿವಾಸಿ ಗಿರಿಗೌಡನ ಮಗ ದೇವರಾಜು ಜೊತೆ 2 ವರ್ಷಗಳ ಹಿಂದೆ ವಿವಾಹವಾಗಿತ್ತು. ಮೃತ ಸುಧಾಳಿಗೆ 11 ತಿಂಗಳ ಮಗು ಇದ್ದು, ಅವಳ ತಂದೆ ಮನೆಯಿಂದ ಸಂಕ್ರಾಂತಿ ಹಬ್ಬಕ್ಕೆ ಪತಿ ಮನೆಗೆ ಬಂದಿದ್ದಳು. ಅಲ್ಲಿಯೇ ವಿಷ ಸೇವಿಸಿ ಸಾವನ್ನಪ್ಪಿದ್ದಳು.
ವರದಕ್ಷಿಣೆ ಕಿರುಕುಳದಿಂದ ಸುಧಾ ಸಾವನ್ನಪ್ಪಿದ್ದಾಳೆಂದು ಸಹೋದರ ಲಿಂಗೇಗೌಡ ಹನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಡಿವೈಎಸ್ಪಿ ಎಚ್.ಆರ್. ಮಹದೇವಯ್ಯ ತನಿಖೆ ಮುಂದುವರೆಸಿ ಆರೋಪಿಗಳ ಪತ್ತೆಗೆ ತಂಡ ರಚಿಸಿ ಕೊಯಮತ್ತೂರಿನಲ್ಲಿ ಆರೋಪಿಗಳನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.