ಬೆಂಗಳೂರು: ಅರ್ಹತಾ ಸುತ್ತಿನಲ್ಲಿ ಗೆದ್ದು ಪ್ರಧಾನ ಹಂತ ತಲುಪಿದ್ದ ಕರ್ನಾಟಕದ ಸಿ.ವಶಿಷ್ಠ ಶುಕ್ರವಾರ ಇಲ್ಲಿ ನಡೆದ ಕೆಟಿಟಿಪಿಎ, ಎಂ.ಪಿ. ಪ್ರಕಾಶ್ ಸ್ಮಾರಕ ಎಐಟಿಎ ಟೆನಿಸ್ ಚಾಂಪಿಯನ್ಷಿಪ್ನ 18 ವರ್ಷದೊಳಗಿನವರ ಬಾಲಕ ವಿಭಾಗದ ಸಿಂಗಲ್ಸ್ನಲ್ಲಿ ಚಾಂಪಿಯನ್ ಆಗಿದ್ದಾರೆ. ಶ್ರೇಯಾಂಕ ರಹಿತ ಆಟಗಾರ್ತಿ ರಶ್ಮಿಕಾ 16 ವರ್ಷದೊಳಗಿನವರ ವಿಭಾಗ ಪ್ರಶಸ್ತಿ ಜಯಿಸಿದ್ದಾರೆ.
ಮಹಿಳಾ ಸೇವಾ ಸಮಾಜ ಕೋರ್ಟ್ನಲ್ಲಿ ನಡೆದ ಫೈನಲ್ನಲ್ಲಿ ಶ್ರೇಯಾಂಕ ರಹಿತ ಆಟಗಾರ ವಷಿಷ್ಠ 6-4, 6-0ರಲ್ಲಿ ತಮ್ಮ ರಾಜ್ಯದವರೇ ಆದ ಬಿ.ಆರ್.ನಿಕ್ಷೇಪ್ ಅವರನ್ನು ಸೋಲಿಸಿದರು. ಮೊದಲ ಸೆಟ್ನಲ್ಲಿ ವಷಿಷ್ಠ ಅವರಿಗೆ ಪೈಪೋಟಿ ಎದುರಾಯಿತು. ಆದರೆ ಎರಡನೇ ಸೆಟ್ನಲ್ಲಿ ಅವರು ಪೂರ್ಣ ಪಾರಮ್ಯ ಮೆರೆದರು. ಜೂನಿಯರ್ ಡೇವಿಸ್ ಕಪ್ ಆಟಗಾರ ನಿಕ್ಷೇಪ್ ಅವರಿಗೆ ಒಂದೂ ಗೇಮ್ ಗೆಲ್ಲಲು ಅವಕಾಶ ನೀಡಲಿಲ್ಲ.
ಆರಂಭದಿಂದಲೇ ಪಂದ್ಯದ ಮೇಲೆ ಪಾರಮ್ಯ ಸಾಧಿಸಿದ ವಶಿಷ್ಠ ಅಗ್ರ ಶ್ರೇಯಾಂಕದ ಆಟಗಾರ ನಿಕ್ಷೇಪ್ ಮೇಲೆ ಒತ್ತಡ ಹೇರಿದರು. ಪ್ರಹ್ಲಾದ್ ಶ್ರೀನಾಥ್ ಅಕಾಡೆಮಿಯಲ್ಲಿ ವಶಿಷ್ಠ ತರಬೇತಿ ಪಡೆಯುತ್ತಿದ್ದಾರೆ.
16 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಮಹಾರಾಷ್ಟ್ರದ ಆದಿತ್ಯ ಅನಂತ್ ಗೋಖಲೆ ಚಾಂಪಿಯನ್ ಆದರು. ಅವರು ಫೈನಲ್ನಲ್ಲಿ 6-4, 7-5ರಲ್ಲಿ ತಮ್ಮ ರಾಜ್ಯದವರೇ ಆದ ನಿಹಿತ್ ರಾವಲ್ ಅವರನ್ನು ಪರಾಭವಗೊಳಿಸಿದರು.
18 ವರ್ಷದೊಳಗಿನವರ ಬಾಲಕಿಯರ ವಿಭಾಗದಲ್ಲಿ ತಮಿಳುನಾಡಿನ ಪ್ರಗತಿ ನಟರಾಜನ್ ಟ್ರೋಫಿ ಎತ್ತಿ ಹಿಡಿದರು. ಅವರು ಅಂತಿಮ ಘಟ್ಟದ ಪಂದ್ಯದಲ್ಲಿ 6-3, 6-3ರಲ್ಲಿ ಕರ್ನಾಟಕದ ರಶ್ಮಿಕಾ ಎದುರು ಜಯ ಗಳಿಸಿದರು.
ಆ ನಿರಾಸೆ ಮರೆತು ಆಡಿದ 13 ವರ್ಷ ವಯಸ್ಸಿನ ರಶ್ಮಿಕಾ 16 ವರ್ಷದೊಳಗಿನವರ ವಿಭಾಗದಲ್ಲಿ ಚಾಂಪಿಯನ್ ಆದರು. ಫೈನಲ್ನಲ್ಲಿ ಅವರು 6-2, 6-2ರಲ್ಲಿ ತಮಿಳುನಾಡಿನ ಅಭಿನಿಕಾ ಅವರನ್ನು ಮಣಿಸಿದರು.
ಆದರೆ ಡಬಲ್ಸ್ ಫೈನಲ್ನಲ್ಲಿ ಕರ್ನಾಟಕದ ನಿಶಾ ಶೆಣೈ ಹಾಗೂ ಹರ್ಷಾ ಸಾಯಿ 4-6, 5-7ರಲ್ಲಿ ಪ್ರಗತಿ ನಟರಾಜನ್ ಹಾಗೂ ನೂಪುರ್ ಉಮಾಶಂಕರ್ ಎದುರು ಸೋಲು ಕಂಡರು.