ಮುಂಬೈ (ಪಿಟಿಐ): ವಾಣಿಜ್ಯ ಬ್ಯಾಂಕ್ಗಳಲ್ಲಿ ಇರುವ ರೂ. 1,700 ಕೋಟಿಗಳಷ್ಟು ಮೊತ್ತದ ವಾರಸುದಾರರನ್ನು ಪತ್ತೆಹಚ್ಚಿ ಅವರಿಗೆ ಈ ಹಣ ಮರಳಿಸಲು ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಬ್ಯಾಂಕ್ಗಳು, ಸಕ್ರಿಯವಾಗಿಲ್ಲದ ಮತ್ತು ವಾರಸುದಾರರು ಇಲ್ಲದ ಖಾತೆಗಳಿಗೆ ಸಂಬಂಧಿಸಿದ ವ್ಯಕ್ತಿಗಳು ಎಲ್ಲಿ ಇದ್ದಾರೆ ಎನ್ನುವುದನ್ನು ಪತ್ತೆ ಹಚ್ಚಿ ಅವರಿಗೆ ಹಣ ಮರಳಿಸಲು ಮುಂದಾಗಬೇಕು. ಈ ಉದ್ದೇಶಕ್ಕೆ ಬ್ಯಾಂಕ್ಗಳು, 10 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿವರೆಗೆ ಸ್ಥಗಿತಗೊಂಡಿರುವ ಖಾತೆಗಳ ವಿವರಗಳನ್ನು ತಮ್ಮ, ತಮ್ಮ ಅಂತರಜಾಲ ತಾಣಗಳಲ್ಲಿ ಪ್ರಕಟಿಸಬೇಕು ಎಂದು `ಆರ್ಬಿಐ~ ಸೂಚಿಸಿದೆ.
ವಿವಿಧ ಬ್ಯಾಂಕ್ಗಳಲ್ಲಿ 2010ರ ಡಿಸೆಂಬರ್ ತಿಂಗಳಾಂತ್ಯದವರೆಗೆ ಒಂದು ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಸ್ಥಗಿತಗೊಂಡಿರುವ ಖಾತೆಗಳಲ್ಲಿ, ರೂ. 1723.24 ಕೋಟಿಗಳಷ್ಟು ಹಣ ಉಳಿದಿದೆ. ಈ ಸಕ್ರಿಯವಾಗಿಲ್ಲದ ಖಾತೆಗಳಲ್ಲಿನ ಹಣವನ್ನು ಸಂಬಂಧಿಸಿದ ವಾರಸುದಾರರು ಯಾವ ರೀತಿ ಮರಳಿ ಪಡೆಯಬೇಕು, ಇಂತಹ ಖಾತೆಗಳನ್ನು ಮತ್ತೆ ಹೇಗೆ ಕಾರ್ಯಾರಂಭ ಮಾಡಬೇಕು, ಹಣ ಮರಳಿ ಪಡೆಯಲು ಯಾವ ದಾಖಲೆಗಳನ್ನು ಸಲ್ಲಿಸಬೇಕು ಮತ್ತಿತರ ವಿವರಗಳನ್ನೂ ಬ್ಯಾಂಕ್ನ ಅಂತರಜಾಲ ತಾಣದಲ್ಲಿ ಪ್ರಕಟಿಸಬೇಕು. ಈ ಪ್ರಕ್ರಿಯೆಯನ್ನು ಜೂನ್ 30ರ ಒಳಗೆ ಪೂರ್ಣಗೊಳಿಸಬೇಕು. ನಿಯಮಿತವಾಗಿ ಮಾಹಿತಿ ನವೀಕರಿಸಬೇಕು ಎಂದು ಸೂಚಿಸಲಾಗಿದೆ.
ಬ್ಯಾಂಕ್ ಖಾತೆಗಳಲ್ಲಿನ ಹಣ ಮರಳಿ ಪಡೆಯದ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಬಗ್ಗೆಯೂ ಕೇಂದ್ರೀಯ ಬ್ಯಾಂಕ್ ಕಳವಳ ವ್ಯಕ್ತಪಡಿಸಿದೆ.
ವಾರಸುದಾರರು ಇಲ್ಲದ ಖಾತೆಗಳ ವಿವರಗಳನ್ನು ಬ್ಯಾಂಕ್ನ ಇಂಟರ್ನೆಟ್ ಸೈಟ್ನಲ್ಲಿ ಪ್ರಕಟಿಸುವಾಗ, ಖಾತೆದಾರರ ಹೆಸರು ಮತ್ತು ವಿಳಾಸಗಳನ್ನಷ್ಟೇ ಪ್ರಕಟಿಸಬೇಕು. ಖಾತೆಯ ಸಂಖ್ಯೆ, ಎಂತಹ ಖಾತೆ ಮತ್ತು ಬ್ಯಾಂಕ್ ಶಾಖೆಯ ಹೆಸರು ಪ್ರಕಟಿಸಬಾರದು ಎಂದು ನಿಬಂಧನೆ ವಿಧಿಸಲಾಗಿದೆ.