ಬೆಂಗಳೂರು: ರಸೆಲ್ ಮಾರುಕಟ್ಟೆ ಬಳಿ ಮೀನಿನ ಸರಕು ತುಂಬಿದ್ದ ಕ್ಯಾಂಟರ್ ವಾಹನಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದ ಆರೋಪದ ಮೇಲೆ ಐದು ಮಂದಿಯನ್ನು ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ.
ಟ್ಯಾನರಿ ರಸ್ತೆಯ ಹಸನ್ ಅಲಿಯಾಸ್ ಹುಸೇನ್ (25), ಶಮ್ಮಿರ್ (20), ಶಾರುಖ್ (19), ಆಸಿಫ್ (20) ಮತ್ತು ಸಲೀಂ (42) ಬಂಧಿತರು. ಆರೋಪಿಗಳು ಕುಖ್ಯಾತ ರೌಡಿ ಕೋಳಿ ಫಯಾಜ್ನ ಮಗ ಫಯಾಜ್ ಖಾನ್ ಅಲಿಯಾಸ್ ಪಪ್ಪುನ ಸಹಚರರು. ಬಂಧಿತರಿಂದ ಬೈಕ್ ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಳಿ ವ್ಯಾಪಾರ ಮಾಡುವ ಫಯಾಜ್ ಖಾನ್ಗೂ ಮತ್ತು ಒಡಿಶಾ ಮೂಲದ ಕೆಲ ಮೀನಿನ ವ್ಯಾಪಾರಿಗಳಿಗೂ ವ್ಯವಹಾರದ ವಿಷಯವಾಗಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಅಲ್ಲದೇ, ಫಯಾಜ್ ಖಾನ್ ಸಹಚರರ ಜತೆ ಸೇರಿಕೊಂಡು ಹಫ್ತಾ ನೀಡುವಂತೆ ಮೀನು ವ್ಯಾಪಾರಿಗಳಿಗೆ ಬೆದರಿಕೆ ಹಾಕುತ್ತಿದ್ದ. ಈ ಕಾರಣಕ್ಕಾಗಿ ಡಿ.13ರಂದು ಜಗಳವಾಗಿತ್ತು. ಇದರಿಂದ ಕೋಪಗೊಂಡಿದ್ದ ಆರೋಪಿಗಳು, ಮೀನಿನ ಸರಕು ತುಂಬಿದ್ದ ಕ್ಯಾಂಟರ್ಗೆ ಡಿ.14ರ ರಾತ್ರಿ ಬೆಂಕಿ ಹಚ್ಚಿದ್ದರು.
ಮೀಸಲಾತಿಗೆ ಆಗ್ರಹಿಸಿ 30ಕ್ಕೆ ಪ್ರತಿಭಟನೆ
ಬೆಂಗಳೂರು: ಸ್ಪೃಶ್ಯ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿರುವ ಕಾಂಗ್ರೆಸ್ ಪಕ್ಷವು ಅಸ್ಪೃಶ್ಯ ಜಾತಿಗಳಿಗೆ ಮೀಸಲಾತಿ ಸೌಲಭ್ಯಗಳು ದೊರೆಯದಂತೆ ಮಾಡಿದೆ ಎಂದು ಕರ್ನಾಟಕ ಪ್ರದೇಶ ಮಾದಿಗರ ಸಂಘದ ರಾಜ್ಯ ಘಟಕದ ಅಧ್ಯಕ್ಷ ದೇವಮಿತ್ರ ಆರೋಪಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಮಾಡಿರುವ ಆದೇಶ ಸಂವಿಧಾನಕ್ಕೆ ವಿರುದ್ಧವಾಗಿದೆ. ಅಸ್ಪೃಶ್ಯ ಜಾತಿಗಳಿಗೇ ಶೇಕಡ 15ರಷ್ಟು ಮೀಸಲಾತಿ ನೀಡುವಂತೆ ಆಗ್ರಹಿಸಿ ಇದೇ 30ರಂದು ಇಲ್ಲಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.