ಬೆಂಗಳೂರು: ಪ್ಯಾರಿಸ್ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ತನ್ನ ವಿರುದ್ಧ `ದೇವಾಸ್ ಮಲ್ಟಿ-ಮೀಡಿಯಾ ಸಂಸ್ಥೆ~ ಸಲ್ಲಿಸಿರುವ ಮಧ್ಯಸ್ಥಿಕೆ ವಿಚಾರಣೆಗೆ ತಡೆ ವಿಧಿಸುವಂತೆ ಕೋರಿ ನಗರ ಸಿವಿಲ್ ಕೋರ್ಟ್ನಲ್ಲಿ `ಅಂತರಿಕ್ಷ್ ಕಾರ್ಪೊರೇಷನ್~ ಅರ್ಜಿ ಸಲ್ಲಿಸಿದೆ.
ಅಂತರಿಕ್ಷ್, ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ವಾಣಿಜ್ಯ ಘಟಕ. `ಇಸ್ರೊ~ದ ಉತ್ಪನ್ನಗಳನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸುವುದು ಇದರ ಕೆಲಸ.
ಎಸ್-ಬ್ಯಾಂಡ್ ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ, ಅಂತರಿಕ್ಷ್ ಕಾರ್ಪೊರೇಷನ್ ಮತ್ತು ದೇವಾಸ್ ಮಲ್ಟಿ ಮೀಡಿಯಾ ಸಂಸ್ಥೆಗಳ ನಡುವೆ 2005ರ ಜ.28ರಂದು ಒಪ್ಪಂದ ನಡೆದಿತ್ತು. ಎಸ್- ಬ್ಯಾಂಡ್ನ ಎರಡು ಉಪಗ್ರಹಗಳನ್ನು 12 ವರ್ಷಗಳ ಕಾಲ ದೇವಾಸ್ಗೆ ಗುತ್ತಿಗೆ ನೀಡಲು ಈ ಒಪ್ಪಂದವು ಅನುಮತಿ ನೀಡಿತ್ತು.
ಈ ಮಧ್ಯೆ, ಎಸ್-ಬ್ಯಾಂಡ್ ಅನ್ನು ರಾಷ್ಟ್ರೀಯ ಬಳಕೆಗೆ ಮೀಸಲಿಡುವ ಸಂಬಂಧ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿತು. ಈ ಹಿನ್ನೆಲೆಯ್ಲ್ಲಲಿ ಅಂತರಿಕ್ಷ್ಗೆ ಎಸ್- ಬ್ಯಾಂಡ್ನ ವಾಣಿಜ್ಯ ಬಳಕೆಗೆ ಅವಕಾಶ ನೀಡಲು ಸರ್ಕಾರ ಒಪ್ಪಲಿಲ್ಲ. ಆದುದರಿಂದ 2011ರ ಫೆ.23ರಂದು ಕೇಂದ್ರ ಸರ್ಕಾರವು ಒಪ್ಪಂದ ಹಿಂದಕ್ಕೆ ಪಡೆಯುವಂತೆ ತಿಳಿಸಿ ಅಂತರಿಕ್ಷ್ ಸಂಸ್ಥೆಗೆ ಪತ್ರ ಬರೆಯಿತು.
ಅಂತರಿಕ್ಷ್ ಪರ ವಾದಿಸುತ್ತಿರುವ ಹಿರಿಯ ವಕೀಲ ಬಿ.ವಿ.ಆಚಾರ್ಯ ತಮ್ಮ ವಾದವನ್ನು ಪೂರ್ಣಗೊಳಿಸಿದ್ದಾರೆ. ಪ್ರತಿವಾದಿ ಪರ ವಕೀಲರ ವಾದ ಇನ್ನೂ ಆರಂಭಗೊಳ್ಳಬೇಕಾಗಿದೆ. ನ್ಯಾಯಾಧೀಶ ಡಿ.ಬಿ.ಪಾಟೀಲ್ ವಿಚಾರಣೆಯನ್ನು ಇದೇ 25ಕ್ಕೆ ಮುಂದೂಡಿದ್ದಾರೆ.