ಕೂಡ್ಲಿಗಿ: ತಾಲ್ಲೂಕಿನ ಅಮ್ಮನಕೇರಿಯ ಬಸವೇಶ್ವರ ರಥೋತ್ಸವವು ಬುಧವಾರ ವಿಜೃಂಭಣೆಯಿಂದ ಜರುಗಿತು. ಸಾವಿರಾರು ಭಕ್ತರು ಜಯಘೋಷಗಳೊಂದಿಗೆ ರಥವನ್ನು ಮುನ್ನಡೆಸಿದರು.
ಬಸವೇಶ್ವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ರಥಕ್ಕೆ ಪ್ರದಕ್ಷಿಣೆ ಹಾಕಿಸಲಾಯಿತು. ನಂತರ ಸ್ವಾಮಿಯ ಪಟವನ್ನು ಹರಾಜು ಹಾಕಲಾಯಿತು. ಮರಬನಹಳ್ಳಿ ಕೋಟ್ರೇಶ್ ದೇವರ ಪಟವನ್ನು ೫೫,೫೦೧ ರೂಪಾಯಿಗೆ ಪಡೆದರು.
ವಿವಿಧ ವಾದ್ಯಗಳೊಂದಿಗೆ, ನಂದಿಕೋಲಿನೊಂದಿಗೆ ಸ್ವಾಮಿಯ ರಥವನ್ನು ಸಂಜೆ ೬ಕ್ಕೆ ಸರಿಯಾಗಿ ಭಕ್ತಾದಿಗಳು ಉತ್ಸಾಹದಿಂದ ಮುನ್ನಡೆಸಿದರು. ಸಾವಿರಾರು ಭಕ್ತರು ಒಕ್ಕೊರಲಿನಿಂದ ಜಯಘೋಷ ಮಾಡಿದರು. ಭಕ್ತರು ಬಾಳೆಹಣ್ಣುಗಳನ್ನು ರಥಕ್ಕೆ ತೂರಿ ಸಂಭ್ರಮಿಸಿದರು.
ಪಾದಗಟ್ಟೆಗೆ ತಲುಪಿದ ನಂತರ ರಥವನ್ನು ಮರಳಿ ಮುನ್ನಡೆಸಲಾಯಿತು. ರಥೋತ್ಸವಕ್ಕೆ ತಾಲ್ಲೂಕಿನ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು.ಕೂಡ್ಲಿಗಿ ಠಾಣೆಯ ಪಿಎಸ್ಐ ಕೃಷ್ಣ ನಾಯ್ಕ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.