ನಟ ದರ್ಶನ್ ಮತ್ತವರ ಪತ್ನಿ ವಿಜಯಲಕ್ಷ್ಮೀ ಅವರ `ಗೃಹಕಲಹ~ ಒಂದು ಪ್ರಹಸನ. ಒಂದೇ ದಿನದಲ್ಲಿ `ಶೂಟಿಂಗ್~ ಆಗಿ ಅದೇ ದಿನ ಪ್ರದರ್ಶನ ಕಂಡು ಸಿಹಿ-ಕಹಿ ಮನರಂಜನೆ ನೀಡಿದ್ದು ವಿಪರ್ಯಾಸ! ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಮನಸ್ತಾಪ, ಜಗಳ, ಹಲ್ಲೆ, ಚಿಕಿತ್ಸೆ, ಬಂಧನ, ದೂರು ವಾಪಸಾತಿ ಎಲ್ಲವೂ ನಾಟಕೀಯ.
ದರ್ಶನ್ ಅವರನ್ನು ಬಂಧಿಸಿದಾಗ ಪೊಲೀಸ್ ಠಾಣೆ ಎದುರು ಅಭಿಮಾನಿಗಳ ಘೋಷಣೆ, ಕೂಗಾಟ, ಬಿ.ಎಂ.ಟಿ.ಸಿ. ಬಸ್ ಮೇಲೆ ಕಲ್ಲೆಸೆತ! ಮಂಡ್ಯದ ಮಹಿಳಾ ಮಣಿಗಳಿಗಂತೂ ದರ್ಶನ್ ಅವರ ಭವಿಷ್ಯ ಕುರಿತೇ ಚಿಂತೆ.
ಮಹಿಳಾ ಸಬಲೀಕರಣ-ಸಂಘಟನೆ ಸಾರ್ಥಕವಾಯಿತು! ಟಿ.ವಿಗಳಲ್ಲಿ ಪ್ರಸಾರವಾದ ವರದಿಯನ್ವಯ ತಕ್ಷಣ ಸ್ಪಂದಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಅವರ ಕಾರ್ಯವೈಖರಿ ಅಭಿನಂದನೀಯ. ಆದರೆ ಇಷ್ಟೊಂದು ಹುಯಿಲೆದ್ದರೂ ರಾಜ್ಯ ಮಾನವ ಹಕ್ಕುಗಳ ಆಯೋಗದ ದರ್ಶನವೇ ಇಲ್ಲ!
ಅಬಲೆಯರ ಪರ ಯಾವ ಮಹಿಳಾ ಸಂಘಗಳೂ ನಿಲ್ಲುವುದಿರಲಿ. ವಿಜಯಲಕ್ಷ್ಮಿಯ ಹಿತಾಸಕ್ತಿಗೆ ವಿರೋಧವಾಗಿ ವರ್ತಿಸಿ `ದರ್ಶನ~ ಪಡೆಯಲು ಆಗ್ರಹ. ಕುಟುಂಬದ ಬಗ್ಗೆ ಏನೇನೂ ಅರಿಯದೆ, ಪೂರ್ವಗ್ರಹಪೀಡಿತರಾಗಿ ಅಂಧ ಅಭಿಮಾನದ `ಪ್ರದರ್ಶನ~.
ಎಲ್ಲವೂ ನಿಚ್ಚಳ. ಹಣ, ತೋಳ್ಬಲ, ಪ್ರಭಾವದ ಗುಂಪುಗಾರಿಕೆ ಪರ ಕೆಲವು ಆಸಕ್ತ ಜನರ ಒಲವು-ನಿಲುವು ಕಂಡು ಬೆಚ್ಚಿದ ಹರಿಣಿ ವಿಜಯಲಕ್ಷ್ಮಿ ಆತ್ಮವಂಚನೆಗೊಳಗಾಗಿ (ಅ)ನ್ಯಾಯದ ಪರ ರಾಜಿಯಾದದ್ದು ಸಹಜ!
ಒಂದು ವೇಳೆ ಪೊಲೀಸರು ಅಗತ್ಯ ಕ್ರಮಕೈಗೊಳ್ಳದಿದ್ದರೆ ಅಧಿಕಾರಸ್ಥರ ಪ್ರಭಾವಕ್ಕೊಳಗಾಗಿದ್ದಾರೆ ಎಂಬ ಆರೋಪ ಹೊರಬೇಕಾದ ದುಃಸ್ಥಿತಿ. ಎಲ್ಲಿದೆ ನ್ಯಾಯ?