ಹುಣಸೂರು: ತಾಲ್ಲೂಕಿನ ಧರ್ಮಾಪುರ ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಡಾ.ಪುಷ್ಪಾ ಅಮರನಾಥ್ ಬುಧವಾರ ಭೇಟಿ ನೀಡಿ ಅಸ್ವಸ್ಥ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.
ಎರಡು ದಿನಗಳ ಹಿಂದೆ ವಸತಿ ನಿಲಯದ ಕುಡಿಯುವ ನೀರು ಸೇವಿಸಿದ 57 ವಿದ್ಯಾರ್ಥಿಗಳು ಅಸ್ಪಸ್ಥರಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರಲ್ಲಿ 7 ಮಕ್ಕಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲೇ ಉಳಿಸಿಕೊಂಡು, ಉಳಿದ 50 ವಿದ್ಯಾರ್ಥಿಗಳನ್ನು ವಸತಿ ನಿಲಯಕ್ಕೆ ಕಳುಹಿಸಲಾಗಿತ್ತು. ವಸತಿ ನಿಲಯ ಮೇಲ್ವಿಚಾರಕರ ಅಸಡ್ಡೆಯೇ ಘಟನೆಗೆ ಮೂಲ ಕಾರಣ ಎಂದು ಡಾ.ಪುಷ್ಪಾ ಆರೋಪಿಸಿದರು.
ನಿಲಯದ ಅಧಿಕಾರಿ ವಿರುದ್ಧ ಜಿಲ್ಲಾ ಮಟ್ಟದ ಅಧಿಕಾರಿಗೆ ದೂರು ನೀಡಿ ಕ್ರಮ ತೆಗೆದುಕೊಳ್ಳಲು ಶಿಫಾರಸು ಮಾಡುವುದಾಗಿ ಹೇಳಿದರು. ಡಾ.ಮುಕುಂದ, ಡಾ.ನವೀನ್, ಮುಖಂಡರಾದ ರಮೇಶ್, ಗವಿನಾಯಕ, ಕಲ್ಕುಣಿಕೆ ಶ್ರೀನಿವಾಸ್, ಅಜ್ಗರ್ಪಾಷಾ, ಮಲ್ಲೇಶ್ಗೌಡ, ದೇವರಾಜು ಇದ್ದರು.