ಕೆಜಿಎಫ್: ಮಳೆಯಿಂದ ಶಾಲಾ ಕೊಠಡಿ ಬಿದ್ದುದನ್ನು ಪ್ರತಿಭಟಿಸಿ, ನೂತನ ಕಟ್ಟಡಕ್ಕಾಗಿ ಆಗ್ರಹಿಸಿ ರಸ್ತೆ ತಡೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಬೇತಮಂಗಲ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಸೋಮವಾರ ಕ್ಯಾಸಂಬಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಳೆಯಿಂದ ಕೊಠಡಿಯೊಂದು ಕುಸಿದು ಬಿದ್ದಿತ್ತು. ಮೊದಲೇ ಕಿಷ್ಕಿಂಧೆಯಂತಿದ್ದ ಶಾಲೆಯಲ್ಲಿ ಈ ಘಟನೆಯಿಂದ ಕುಪಿತಗೊಂಡ ವಿದ್ಯಾರ್ಥಿಗಳು ನೂತನ ಕಟ್ಟಡವನ್ನು ಪ್ರೌಢಶಾಲೆ ವಿಭಾಗಕ್ಕೆ ಕಟ್ಟಿಸಿಕೊಡಬೇಕು ಎಂದು ಒತ್ತಾಯಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. ನಂತರ ಕೊಂಚ ಕಾಲ ರಸ್ತೆ ತಡೆ ನಡೆಸಿದರು.
ವಿದ್ಯಾರ್ಥಿಗಳ ಅನಿರೀಕ್ಷಿತ ರಸ್ತೆ ತಡೆಯಿಂದ ಕೋಪಗೊಂಡ ಬೇತಮಂಗಲ ಸಬ್ ಇನ್ಸ್ಪೆಕ್ಟರ್ ಜಗದೀಶ್ ವಿದ್ಯಾರ್ಥಿಗಳಿಗೆ ಲಾಠಿ ಏಟಿನ ರುಚಿ ತೋರಿಸಿದರು. ಪ್ರೌಢಶಾಲೆ ವಿದ್ಯಾರ್ಥಿಗಳು ಮಕ್ಕಳ ಹಕ್ಕು ಕಾಯಿದೆ ವ್ಯಾಪ್ತಿಗೆ ಬರುತ್ತಾರೆ ಎಂಬ ಅರಿವಿದ್ದರೂ ಸಾರ್ವಜನಿಕವಾಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಘಟನೆಯಲ್ಲಿ ಏಟು ತಿಂದ ಅನಿತಾ ಎಂಬ ವಿದ್ಯಾರ್ಥಿನಿ ಭಯಗೊಂಡು ಕಳೆದ ಎರಡು ದಿನಗಳಿಂದ ಶಾಲೆಗೆ ಬರುತ್ತಿಲ್ಲ ಎಂದು ಘಟನೆ ವೀಕ್ಷಿಸಿದ ವಿದ್ಯಾರ್ಥಿಗಳು ತಿಳಿಸಿದರು. ರಸ್ತೆ ತಡೆಗೆ ಪ್ರಚೋದಿಸಿದ ಆರೋಪದ ಮೇರೆಗೆ ಕಾಲೊನಿಯ ಹಳೆ ವಿದ್ಯಾರ್ಥಿಯೊಬ್ಬನನ್ನು ತಮ್ಮ ವಶಕ್ಕೆ ತೆಗೆದುಕೊಂಡು ಥಳಿಸಿದರು. ನಂತರ ಬಂಗಾರಪೇಟೆ ಶಾಸಕ ಎಂ.ನಾರಾಯಣಸ್ವಾಮಿ ಸೂಚನೆ ಮೇರೆಗೆ ಆತನನ್ನು ಬಿಟ್ಟು ಕಳಿಸಲಾಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.