ಬೆಳ್ತಂಗಡಿ: ಉಜಿರೆ ಸಮೀಪ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದು, ಆಕೆಯ ಶವ ಪೊದೆಗಳ ಮಧ್ಯೆ ಬುಧವಾರ ಮಧ್ಯಾಹ್ನ ಪತ್ತೆಯಾಗಿದೆ. ಉಜಿರೆಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ಓದುತ್ತಿದ್ದ ಸೌಜನ್ಯ (17) ಕೊಲೆಗೀಡಾದ ವಿದ್ಯಾರ್ಥಿನಿ.
ಮನೆಯಲ್ಲಿ ವಿಶೇಷ ಸಮಾರಂಭ ಎಂದು ಸೌಜನ್ಯ ಮಂಗಳವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಕಾಲೇಜಿನಿಂದ ಬಸ್ಸಿನಲ್ಲಿ ಬಂದು ನೇತ್ರಾವತಿ ಸ್ನಾನ ಘಟ್ಟದ ಬಳಿ ಇಳಿದು ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಳು.
ಸುಮಾರು ಅರ್ಧ ಕಿ.ಮೀ ದೂರ ಹೋದಾಗ ಆಕೆಯನ್ನು ಹಿಂಬಾಲಿಸಿದ ಯುವಕರ ತಂಡ ಬಲಾತ್ಕಾರವಾಗಿ ಕಾಡಿನ ಕಡೆಗೆ ಎಳೆದುಕೊಂಡು ಹೋಗಿ ಸಣ್ಣ ನದಿಯನ್ನು ದಾಟಿ ಪೊದೆಯ ಮಧ್ಯದಲ್ಲಿ ಅತ್ಯಾಚಾರ ನಡೆಸಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ವಿದ್ಯಾರ್ಥಿನಿಯ ತಂದೆ ಚಂದಪ್ಪ ಗೌಡ ಮಂಗಳವಾರ ನೀಡಿದ ದೂರಿನಂತೆ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಕಾಲೇಜಿನ ಸಮವಸ್ತ್ರದಲ್ಲಿ, ಅರೆ ನಗ್ನಾವಸ್ಥೆಯಲ್ಲಿ ಆಕೆಯ ಶವ ಪತ್ತೆಯಾಗಿದೆ. ಕುತ್ತಿಗೆ ಮತ್ತು ಕಿವಿಯಲ್ಲಿದ್ದ ಚಿನ್ನದ ಆಭರಣಗಳು ಯಥಾಸ್ಥಿತಿಯಲ್ಲಿವೆ. ಕೈಗಳನ್ನು ಕಟ್ಟಿಹಾಕ್ದ್ದಿದು, ನದಿಯ ಈಚೆ ದಡದಲ್ಲಿ ಪೊದರಿನ ಬಳಿ ಆಕೆಯ ಚಪ್ಪಲಿ ಮತ್ತು ನೀರಿನ ಬಾಟಲಿ ಪತ್ತೆಯಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಆಕ್ರೋಶ: ಇತ್ತೀಚೆಗೆ ಹಲವು ಕೊಲೆ ಪ್ರಕರಣಗಳು ನಡೆದರೂ ಅಪರಾಧಿಗಳ ಪತ್ತೆಯಾಗಿಲ್ಲ. ಕೆಲವು ಪ್ರಕರಣಗಳಲ್ಲಿ ಆರೋಪಿಗಳು ಪತ್ತೆಯಾದರೂ ಅವರಿಗೆ ಶಿಕ್ಷೆಯಾಗಿಲ್ಲ. ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದರ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಧರ್ಮಸ್ಥಳದಲ್ಲಿರುವ ಪೊಲೀಸ್ ಹೊರ ಠಾಣೆಯನ್ನು ಪೂರ್ಣ ಪ್ರಮಾಣದ ಠಾಣೆಯನ್ನಾಗಿ ಉನ್ನತ ದರ್ಜೆಗೇರಿಸಬೇಕು ಎಂದು ಆಗ್ರಹಿಸಿದ್ದಾರೆ. ಸ್ನಾನಘಟ್ಟದಲ್ಲಿ ಹೊರ ಪೊಲೀಸ್ ಠಾಣೆಗಾಗಿ ಕಟ್ಟಡವೊಂದು ಕೆಲವು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದರೂ ಅದು ಬೀಗಮುದ್ರೆಯ ಸ್ಥಿತಿಯಲ್ಲಿಯೇ ಇದೆ ಎಂದು ಸ್ಥಳೀಯರು ಅಸಮಾಧಾನವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.