ಹೈದರಾಬಾದ್ (ಪಿಟಿಐ): ವಿದ್ಯುತ್ ದರ ಏರಿಕೆ ಮತ್ತು ಅನಿಯಮಿತ ವಿದ್ಯುತ್ ಕಡಿತವನ್ನು ವಿರೋಧಿಸಿ ವಿದ್ಯುತ್ ಕಚೇರಿಗೆ ಮುತ್ತಿಗೆ ಹಾಕಲು ಮೆರವಣಿಗೆಯಲ್ಲಿ ತೆರಳುತ್ತಿದ್ದ ತೆಲುಗುದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು, ಪಕ್ಷದ 25 ಶಾಸಕರು ಮತ್ತು ಹಿರಿಯ ಮುಖಂಡರನ್ನು ಪೊಲೀಸರು ಮುನ್ನೆಚ್ಚರಿಕೆಯ ಕ್ರಮವಾಗಿ ಬಂಧಿಸಿದ್ದಾರೆ.
ಬಂಧಿತರನ್ನು ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ತಮ್ಮ ಬಂಧನವನ್ನು ವಿರೋಧಿಸಿ ಈ ನಾಯಕರು ಠಾಣೆಯಲ್ಲೇ ಧರಣಿ ನಡೆಸಿದರು.
ತೆಲುಗು ದೇಶಂ ಪಕ್ಷದ ಪ್ರಧಾನ ಕಚೇರಿ ಎನ್ಟಿಆರ್ ಭವನದಿಂದ ಸೋಮಾಜಿಗುಡದಲ್ಲಿರುವ ವಿದ್ಯುತ್ ಭವನದವರೆಗೆ ಮೆರವಣಿಗೆ ನಡೆಸಲು ನಿರ್ಧರಿಸಲಾಗಿತ್ತು. ಮೆರವಣಿಗೆ ಬಂಜಾರಾ ಹಿಲ್ಸ್ ಬಳಿಯ ಒಂದನೇ ರಸ್ತೆಗೆ ಬಂದಾಗ ಪೊಲೀಸರು ಮೆರವಣಿಗೆಕಾರರನ್ನು ತಡೆದು ವಶಕ್ಕೆ ತೆಗೆದುಕೊಂಡರು.
ಪೊಲೀಸರು ವ್ಯಾನಿನೊಳಗೆ ಪ್ರತಿಭಟನಾಕಾರರನ್ನು ಬಲವಂತವಾಗಿ ತಳ್ಳುವಾಗ ಮಾತಿನ ಚಕಮಕಿ ನಡೆಯಿತು. ಸುಮಾರು 45 ನಿಮಿಷಗಳ ಕಾಲ ನಡೆದ ವಾಕ್ಸಮರದ ನಂತರ ಪೊಲೀಸರು ಚಂದ್ರಬಾಬು ನಾಯ್ಡು ಸೇರಿದಂತೆ ಪ್ರಮುಖ ಮುಖಂಡರನ್ನು ವಶಕ್ಕೆ ತೆಗೆದುಕೊಂಡರು.
`2004ರಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿ ಇದ್ದಾಗ ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಆದರೆ ಕಳೆದ ಏಳು ವರ್ಷಗಳಿಂದ ವಿದ್ಯುತ್ ಕ್ಷೇತ್ರ ತುಂಬಾ ಹದಗೆಟ್ಟಿದ್ದು, ಕೈಗಾರಿಕೆ ಮತ್ತು ಕೃಷಿ ಕುಂಠಿತಗೊಂಡಿದೆ ಎಂದರು.