ಕುಶಾಲನಗರ (ಕೊಡಗು ಜಿಲ್ಲೆ): ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಬೆಟ್ಟಗೇರಿ ಬಳಿ ವಿದ್ಯುತ್ ಸ್ಪರ್ಶದಿಂದ 15 ವರ್ಷದ ಸಲಗವೊಂದು ಸತ್ತ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಆನೆಕಾಡು ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಚಿಕ್ಕಬೆಟ್ಟಗೇರಿ ಗ್ರಾಮದ ವಸಂತ ಕುಮಾರ್ ಎಂಬುವವರ ಜೋಳದ ಹೊಲಕ್ಕೆ ಆನೆ ನುಸುಳಲು ಪ್ರಯತ್ನಿಸಿದ ಸಂದರ್ಭದಲ್ಲಿ ಬೇಲಿಗೆ ಅಳವಡಿಸಿದ್ದ ವಿದ್ಯುತ್ ಸ್ಪರ್ಶವಾಗಿದೆ. ಆನೆಯು ಪಿರಿಯಾಪಟ್ಟಣ ತಾಲ್ಲೂಕಿನ ದೊಡ್ಡಹೊಸೂರು ಅರಣ್ಯ ಪ್ರದೇಶದಿಂದ ಮೂರು ದಿನಗಳ ಹಿಂದೆ ಈ ಪ್ರದೇಶಕ್ಕೆ ಬಂದಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.
ರೈತರು ಬೆಳೆಗಳ ರಕ್ಷಣೆಗಾಗಿ ವಿದ್ಯುತ್ ಕಂಬದಿಂದ ಬೇಲಿಗೆ ಕಾನೂನು ಬಾಹಿರವಾಗಿ ವಿದ್ಯುತ್ ಸಂಪರ್ಕ ತೆಗೆದುಕೊಂಡಿರುವುದು ಕಂಡುಬಂದಿದೆ. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕುಶಾಲನಗರ ಆರ್ಎಫ್ಓ ಎಂ.ಎಂ.ಅಚ್ಚಪ್ಪ ತಿಳಿಸಿದ್ದಾರೆ.