ಬೆಂಗಳೂರು: ವಿಧಾನ ಪರಿಷತ್ನ 11 ಸ್ಥಾನಗಳಿಗೆ ಸೋಮವಾರ ಚುನಾವಣೆ ನಡೆಯುತ್ತಿದ್ದ ವೇಳೆ ಕೆಲ ಗಂಟೆಗಳ ಕಾಲ ವಿಧಾನಸೌಧದಲ್ಲಿ ಕಾಣಿಸಿಕೊಂಡ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಫಲಿತಾಂಶ ಪ್ರಕಟವಾದ ಬಳಿಕ ಪ್ರತಿಕ್ರಿಯೆಗೂ ದೊರೆಯಲಿಲ್ಲ.
ಬೆಳಿಗ್ಗೆ 9ರಿಂದ ಸಂಜೆ 4ವರೆಗೆ ಮತದಾನಕ್ಕೆ ಅವಕಾಶವಿತ್ತು. ಸೋಮವಾರ ಬೆಳಿಗ್ಗೆಯೇ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತಿತರರು ವಿಧಾನಸೌಧಕ್ಕೆ ಬಂದು ಪಕ್ಷದ ಶಾಸಕರೊಂದಿಗೆ ಸಮಾಲೋಚನೆಯಲ್ಲಿ ತೊಡಗಿದ್ದರು.
ಆದರೆ, ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅತ್ತ ಸುಳಿಯಲೇ ಇಲ್ಲ. ಬೇರೆ ದಾರಿ ಇಲ್ಲದೇ ಪರಮೇಶ್ವರ್ ಅವರೇ ಮತ ಹಂಚಿಕೆ ಪಟ್ಟಿಯನ್ನೂ ಸಿದ್ಧಪಡಿಸಿದರು. ಮಧ್ಯಾಹ್ನ 1.30ರ ನಂತರ ವಿಧಾನಸೌಧಕ್ಕೆ ಬಂದ ಸಿದ್ದರಾಮಯ್ಯ ಕೆಲಕಾಲ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಇದ್ದರು.
ನಂತರ ಮತ ಚಲಾಯಿಸಿ ಅಲ್ಲಿಂದ ನಿರ್ಗಮಿಸಿದರು. ಸಂಜೆ ಮತ ಎಣಿಕೆ ನಡೆಯುವಾಗಲೂ ಅತ್ತ ಸುಳಿಯಲಿಲ್ಲ. ರಾತ್ರಿ ಮನೆಯಲ್ಲಿದ್ದರೂ ಫಲಿತಾಂಶ ಕುರಿತು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.