ಬೆಂಗಳೂರು (ಪಿಟಿಐ): ವಿಶೇಷ ಅಧಿವೇಶನದ ಎರಡನೇ ದಿನ ಸದನದಲ್ಲಿ ಬರೇ ಸರ್ಕಾರದ್ದೇ ಕಾರುಬಾರು. ಪ್ರಮುಖ ವಿರೋಧಪಕ್ಷಗಳು ಕಲಾಪದಿಂದ ದೂರ ಸರಿದಿದ್ದು, ಶುಕ್ರವಾರವೂ ಕಾಂಗ್ರೆಸ್ ವಿಧಾನಸಭೆಯ ಕಲಾಪದಿಂದ ಹೊರಗುಳಿಯಿತು.
ಹೀಗಾಗಿ ಬರೇ ಬಿಜೆಪಿ ಸದಸ್ಯರಿಂದಲೇ ಕೂಡಿದ್ದ ವಿಧಾನಸಭೆಯಲ್ಲಿ ಮೂರು ಮಸೂದೆಗಳನ್ನು ಮಂಡಿಸಲಾಯಿತು. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ (ತಿದ್ದುಪಡಿ) ಮಸೂದೆ 2011, ಕರ್ನಾಟಕ ಭೂ ಕಂದಾಯ ತಿದ್ದುಪಡಿ ಮಸೂದೆ 2011 ಹಾಗೂ ಕರ್ನಾಟಕ ರಾಜ್ಯ ನವೀನಾತ್ಮಕ ವಿಶ್ವವಿದ್ಯಾಲಯ ಮಸೂದೆ 2011 ಗಳನ್ನು ಮಂಡಿಸಲಾಯಿತು.
ಶುಕ್ರವಾರವೂ ಕಾಂಗ್ರೆಸ್ ತನ್ನ ಶಾಸಕಾಂಗ ಪಕ್ಷದ ಸದಸ್ಯರ ಜತೆ ಸಮಾಲೋಚನೆ ನಡೆಸಿತು. ಇಡೀ ಅಧಿವೇಶನವನ್ನು ಬಹಿಷ್ಕರಿಸಬೇಕೆ? ಬೇಡವೆ? ಎಂಬ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಸದಸ್ಯರ ಸಭೆ ಕರೆದು, ಎಲ್ಲರ ಅಭಿಪ್ರಾಯ ಪಡೆದು ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಅತ್ತ ಮೇಲ್ಮನೆಯಲ್ಲಿ ಕಾಂಗ್ರೆಸ್ ಕಲಾಪದಲ್ಲಿ ಭಾಗವಹಿಸಿ ಇತ್ತೀಚೆಗೆ ಶಾಸಕರ ಅನರ್ಹತೆ ರದ್ದು ಕುರಿತು ಸುಪ್ರೀಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ನಿಲುವಳಿ ಸೂಚನೆ ಮಂಡಿಸಿ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.