ಚಿತ್ರದುರ್ಗ: ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವ ಶೈಲಿಯಲ್ಲಿ ಬದಲಾವಣೆ ಆಗಬೇಕಿದೆ. ಪರಿಣಾಮಕಾರಿಯಾಗಿ, ವಿಭಿನ್ನವಾಗಿ ಮತ್ತು ಕಲಾತ್ಮಕವಾಗಿ ಬೋಧನೆ ಮಾಡುವ ಮೂಲಕ ಕಲಿಕೆಯನ್ನು ಆಕರ್ಷಣೀಯವನ್ನಾಗಿ ಮಾಡಬೇಕಾಗಿದೆ ಎಂದು ಶಿಕ್ಷಣ ಇಲಾಖೆ ಸಮನ್ವಯಾಧಿಕಾರಿ ಪಿ.ಎನ್. ಮಂಜುಳಾ ಹೇಳಿದರು.
ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವ ಕ್ಲಸ್ಟರ್ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಬರುವ ಹಾಡುಗಳನ್ನು ಸುಲಭವಾಗಿ ಕಲಿಯುವ ಮಕ್ಕಳು ಪದ್ಯಗಳನ್ನು ಕಲಿಯಲು ತಡವರಿಸುತ್ತಾರೆ. ಕಲಾತ್ಮಕವಾದಂತ ದೃಶ್ಯ ಹಾಗೂ ಶ್ರವ್ಯ ಮಾಧ್ಯಮಗಳು ಗಾಢವಾಗಿ ಮಕ್ಕಳ ಮೇಲೆ ಪರಿಣಾಮ ಬೀರಿವೆ. ಆದ್ದರಿಂದ ಶಿಕ್ಷಕರು ಮಕ್ಕಳ ಮನಸ್ಸು ಅರಿತು ಕಲಿಸುವ ರೀತಿ ಬದಲಾಗಬೇಕು ಎಂದರು.
ರಾಷ್ಟ್ರೀಯ ಹಾಗೂ ರಾಜ್ಯ ಪಠ್ಯಕ್ರಮಕ್ಕೆ ಅನುಗುಣವಾಗಿ ಶಿಕ್ಷಕರು ಬೋಧನೆ ಮಾಡುತ್ತ್ದ್ದಿದು, ಯಾಂತ್ರಿಕ ರೀತಿಯಲ್ಲಿ ಸಾಗುತ್ತಿರುವುದು ಸಲ್ಲದು. ನಮ್ಮಲಿನ ಪಠ್ಯಕ್ರಮದಲ್ಲಿ ಸಾಕಷ್ಟು ಬದಲಾವಣೆ ಆಗಬೇಕಿದೆ. ಇಂದು ಪ್ರಯೋಗದ ಮೂಲಕ ಬೋಧನೆ ಮಾಡಿದರೆ ಮಕ್ಕಳ ಮನಸ್ಸಿನಲ್ಲಿಯೂ ಶಾಶ್ವತವಾಗಿ ಉಳಿಯುತ್ತವೆ ಎಂದು ಅಭಿಪ್ರಾಯಪಟ್ಟರು.
ರೋಟರಿ ಟ್ರಸ್ಟ್ ಮತ್ತು ವಿದ್ಯಾಲಯದ ಕಾರ್ಯದರ್ಶಿ ವೈ. ಚಂದ್ರಶೇಖರಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಖಜಾಂಚಿ ಬ್ರಹ್ಮಾನಂದ ಗುಪ್ತ ಮಾತನಾಡಿದರು. ಸ್ಟೆಪಿಂಗ್ ಸ್ಟೋನ್ ಸಂಸ್ಥೆಯ ಮುಖ್ಯ ಶಿಕ್ಷಕಿ ಮಲ್ಲಿಕಾ, ಮುಖ್ಯೋಪಾಧ್ಯಯ ಶಿವಕುಮಾರ್, ಶೇಖರಪ್ಪ, ಷಹನಾಜ್, ಎಚ್.ಎಂ. ಉಮಾದೇವಿ ಹಾಜರಿದ್ದರು. ಉಷಾ ಪ್ರಾರ್ಥಿಸಿದರು. ಕೆ.ಎನ್. ಹಾಲೇಶ್ ಸ್ವಾಗತಿಸಿದರು. ಆರ್. ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.
ಬಿ.ದುರ್ಗದಲ್ಲೂ `ಕಾರಂಜಿ'
ಚಿಕ್ಕಜಾಜೂರು: ಮಕ್ಕಳ ಪ್ರತಿಭೆ ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಿ ಉತ್ತಮ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರ ಹಾಗೂ ಪೋಷಕರದು ಎಂದು ಸಿಆರ್ಪಿ ರೇವಣಪ್ಪ ಹೇಳಿದರು.
ಸಮೀಪದ ಬಿ. ದುರ್ಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಕ್ಲಸ್ಟರ್ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಅವರು ಮಾತನಾಡಿ, ಸರ್ಕಾರದ ಯೋಜನೆ ಸಾಕಾರಗೊಳ್ಳುವಲ್ಲಿ ಶಿಕ್ಷಕರು- ಪೋಷಕರ ಪಾತ್ರ ಹೆಚ್ಚಿದೆ ಎಂದರು.
ಬಹುಮಾನದ ಪ್ರಾಯೋಜಕತ್ವವನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷ ನರಸಿಂಹ ಮೂರ್ತಿ ಮತ್ತು ಕೃಷಿ ಸಹಕಾರ ಸಂಘದ ಕಾರ್ಯದರ್ಶಿ ಉಜ್ಜಿನಪ್ಪ ವಹಿಸಿದ್ದರು.
ಎಸ್ಡಿಎಂಸಿ ಅಧ್ಯಕ್ಷ ಎಸ್.ಕೆ. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಯೋಜಕ ಕೆ. ಶಿವಪ್ಪ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಪುಟ್ಟಿಬಾಯಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ನರಸಿಂಹಮೂರ್ತಿ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ವಿಶ್ವನಾಥಾಚಾರ್, ಎಸ್ಡಿಎಂಸಿ ಉಪಾಧ್ಯಕ್ಷೆ ಸುಲೋಚನಮ್ಮ, ಬಿ.ಎಂ. ನಾಗರಾಜ್, ಕೆ.ಪಿ. ನಾಗರಾಜ್, ಗುರಮೂರ್ತಿ, ರುದ್ರೇಶ್, ಸಿಆರ್ಪಿಗಳಾದ ವೆಂಕಟೇಶ್, ಬಸವರಾಜ್, ಗುರುಸ್ವಾಮಿ ಇದ್ದರು.
ಪ್ರಭಾರ ಮುಖ್ಯಶಿಕ್ಷಕ ರುದ್ರಪ್ಪ ಸ್ವಾಗತಿಸಿದರು. ಕೆ.ಆರ್. ಕಾಮಾಕ್ಷಿ ವಂದಿಸಿದರು. ಕೆ.ಬಿ. ವಿಜಯಕುಮಾರಿ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.