ನವದೆಹಲಿ (ಐಎಎನ್ಎಸ್): ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರು ಭಾನುವಾರ ಬೆಳಗ್ಗೆ ಲಂಡನ್ ನಿಂದ ವಾಪಸಾಗುತ್ತಿದ್ದ ವೇಳೆಯಲ್ಲಿ ಸುಮಾರು 150 ಮಂದಿ ಪ್ರತಿಭಟನಕಾರರು ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಕಾನೂನು ಸಚಿವರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.
ಆಕ್ಸಫರ್ಡ್ ವಿಶ್ವವಿದ್ಯಾಲಯದ ಗೌರವ ಪಡೆಯುವ ಸಲುವಾಗಿ ಲಂಡನ್ ಗೆ ತೆರಳಿದ್ದ ಖುರ್ಷಿದ್ ಭಾನುವಾರ ಮುಂಜಾನೆ ವಾಪಸಾದರು. ಅವರು ವಿಮಾನದಿಂದ ಇಳಿಯುತ್ತಿದ್ದಂತೆಯೇ ಭ್ರಷ್ಟಾಚಾರ ವಿರುದ್ಧ ಭಾರತ ಸಂಘಟನೆ ನಾಯಕ ಅರವಿಂದ ಕೇಜ್ರಿವಾಲ್ ಬೆಂಬಲಿರು ನಿಲ್ದಾಣದಲ್ಲಿ ಪ್ರತಿಷ್ಠಿತ ವ್ಯಕ್ತಿಗಳು ಹೊರಬರುವ ದ್ವಾರದಲ್ಲಿ ಸೇರಿ ಖುರ್ಷಿದ್ ವಿರೋಧಿ ಭಿತ್ತಿಚಿತ್ರಗಳನ್ನು ಹಿಡಿದು ಘೋಷಣೆ ಕೂಗಿದರು.
ಭದ್ರತಾಸಿಬ್ಬಂದಿ ಸಚಿವರನ್ನು ವಿಮಾನ ನಿಲ್ದಾಣದಿಂದ ಕರೆದುಕೊಂಡು ಹೋಗಬೇಕಾಯಿತು. ನಂತರ ದೆಹಲಿ ಪೊಲೀಸರು ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿ ಪ್ರತಿಭಟನಕಾರರನ್ನು ಚದುರಿಸಿದರು.
ಕೇಜ್ರಿವಾಲ್ ಮತ್ತು ಬೆಂಬಲಿಗರ ತಂಡವು ಖುರ್ಷಿದ್ ಪತ್ನಿ ಲೂಸಿ ನಡೆಸುತ್ತಿರುವ ಸರ್ಕಾರೇತರ ಸಂಸ್ಥೆಯಲ್ಲಿ ಹಣಕಾಸು ಅಕ್ರಮಗಳು ನಡೆದಿವೆ ಎಂದು ಆಪಾದಿಸಿದ್ದಾರೆ.
ಏನಿದ್ದರೂ ಭ್ರಷ್ಟಾಚಾರ ವಿರುದ್ಧ ಭಾರತ ಸಂಘಟನೆಯು ಕೇಜ್ರಿವಾಲ್ ಅವರಿಗೆ ಬೆಂಬಲ ನೀಡಿದೆ, ಆದರೆ ಈ ಪ್ರತಿಭಟನೆಯನ್ನು ಅದು ಸಂಘಟಿಸಿರಲಿಲ್ಲ ಎಂದು ಐಎಸಿ ಸದಸ್ಯ ಅಶ್ವತಿ ಮುರಳೀಧರನ್ ಐಎಎನ್ ಎಸ್ ಗೆ ತಿಳಿಸಿದರು.