ನೆಲಮಂಗಲ: ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ಸಮಿತಿ ಏರ್ಪಡಿಸಿದ್ದ ಭಾರತಕ್ಕಾಗಿ ಓಟ ಕಾರ್ಯಕ್ರಮದಲ್ಲಿ ಪಟ್ಟಣದ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡು ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ನಂತರ ನಡೆದ ಸಮಾರಂಭವನ್ನು ಉದ್ಘಾಟಿಸಿದ ನ್ಯಾಷನಲ್ ಶಾಲೆಯ ನಿವೃತ್ತ ಅಧ್ಯಾಪಕ ಎಚ್.ನಾಗಭೂಷಣರಾವ್, ‘ವಿವೇಕಾನಂದರು ದೇಶದ ಬಡತನ ನಿರ್ಮೂಲನೆಯ ಕನಸು ಕಂಡವರು. ಈ ನಿಟ್ಟಿನಲ್ಲಿ ಭಾರತದ ಎಲ್ಲ ತರುಣರು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಲು ಸಂಕಲ್ಪ ಮಾಡಬೇಕು’ ಎಂದರು.
ಶಿವಗಂಗೆಯ ಮೇಲಣಗವಿ ಮಠದ ಮಲಯ ಶಾಂತಮುನಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಅತ್ಯಾಚಾರ, ಭ್ರಷ್ಟಾಚಾರಗಳಿಂದ ವಿವೇಕಾನಂದರ ಬಗ್ಗೆ ಮಾತನಾಡುವ ನೈತಿಕ ಹಕ್ಕನ್ನು ನಾವು ಕಳೆದುಕೊಂಡಿದ್ದೇವೆ. ಅವರ ತತ್ವವನ್ನು ಇಡೀ ವಿಶ್ವವೇ ಪಾಲಿಸುತ್ತಿದೆ. ಆದರೆ, ಭಾರತ ಪಾಲಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಸುಪಾಲ ಬಿ.ಡಿ.ತಿಪ್ಪೇಸ್ವಾಮಿ, ಸಮಿತಿಯ ಸಂಚಾಲಕ ಸುಗ್ಗರಾಜು, ಹೇಮಂತಗೌಡ, ರಾಮು ಜೋಗಿಹಳ್ಳಿ ಉಪಸ್ಥಿತರಿದ್ದರು.