ತುಮಕೂರು: ಸ್ವಾಮಿ ವಿವೇಕಾನಂದರು ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಸರ್ವಧರ್ಮ ಸಮ್ಮೇಳನದಲ್ಲಿ ವಿಶ್ವಕ್ಕೆ ಸಾರುವ ಭಾರತದ ಬಗ್ಗೆ ವಿದೇಶಗಳಲ್ಲಿ ಮನೆ ಮಾಡಿದ್ದ ಕೀಳು ಭಾವನೆಯನ್ನು ಹೋಗಲಾಡಿಸಿ, ಗೌರವ ಭಾವನೆ ಮೂಡಿಸಿದ್ದಾರೆ ಎಂದು ಉಪನ್ಯಾಸಕ ಬಿ.ಜಿ.ಪ್ರದೀಪ್ ತಿಳಿಸಿದರು.
ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಬುಧವಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯು ಎಸ್ಸಿ, ಎಸ್ಟಿ ವಿದ್ಯಾರ್ಥಿನಿಲಯದಲ್ಲಿ ಎಬಿವಿಪಿ ಹಮ್ಮಿಕೊಂಡಿದ್ದ ಯುವ ಸ್ಫೂರ್ತಿ ಸಪ್ತಾಹದಲ್ಲಿ ಅವರು ಉಪನ್ಯಾಸ ನೀಡಿದರು.
ಬ್ರಿಟಿಷರ ಆಳ್ವಿಕೆಯ ಫಲವಾಗಿ ಪಾಶ್ಚಿಮಾತ್ಯ ಸಂಸ್ಕೃತಿ, ಮೆಕಾಲೆ ಶಿಕ್ಷಣದ ಪ್ರಭಾವದಿಂದ ದೇಶ ಅಭಿವೃದ್ಧಿಶೀಲ ರಾಷ್ಟ್ರವಾಗಿಯೇ ಉಳಿದಿದೆ. ವಿವೇಕಾನಂದರ ಸ್ವದೇಶಿ ಚಿಂತನೆಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡು ದೇಶಕ್ಕೆ ಕೊಡುಗೆ ನೀಡಬೇಕು ಎಂದು ಕರೆನೀಡಿದರು.ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಶಿವಾನಂದ, ಎಬಿವಿಪಿ ನಗರ ಕಾರ್ಯದರ್ಶಿ ಅಭಿಷೇಕ್ ಇನ್ನಿತರರು ಇದ್ದರು.
ಮೌಲ್ಯಾಧಾರಿತ ಶಿಕ್ಷಣ ಬೇಕು: ಸಪ್ತಗಿರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ತುಮಕೂರು ವಿ.ವಿ ಅಕಾಡೆಮಿಕ್ ಕೌನ್ಸಿಲ್ ಸದಸ್ಯೆ ನಿವೇದಿತಾ ರವೀಶ್ ಮಾತನಾಡಿ, ವಿವೇಕಾನಂದರ ದೃಷ್ಟಿಯಲ್ಲಿ ಶಿಕ್ಷಣವೆಂದರೆ ವ್ಯಕ್ತಿಯಲ್ಲಿರುವ ಪರಿಪೂರ್ಣತೆಯನ್ನು ಜಾಗೃತಗೊಳಿಸಿ, ಚಾರಿತ್ರ್ಯವಂತರನ್ನಾಗಿಸುವುದು.
ಆದರೆ ದುರಷೃಷ್ಟವಶಾತ್ ಇಂದು ನಮ್ಮ ವಿ.ವಿಗಳು ಮತ್ತು ಕಾಲೇಜುಗಳು ಪದವೀಧರರನ್ನು ಹುಟ್ಟುಹಾಕುವ ಕಾರ್ಖಾನೆಗಳಾಗಿವೆ ಎಂದು ವಿಷಾದಿಸಿದರು. ಸಮಾಜಕ್ಕೆ ಮೌಲ್ಯಾಧಾರಿತ ಶಿಕ್ಷಣ ಬೇಕಾಗಿದೆ ಎಂದು ಪ್ರತಿಪಾದಿಸಿದರು.ಎಬಿವಿಪಿ ನಗರ ಉಪಾಧ್ಯಕ್ಷ ಗುರುಪ್ರಸಾದ್, ಪ್ರಾಂಶುಪಾಲ ವಾಸುದೇವ ಮೂರ್ತಿ ಮಾತನಾಡಿದರು.