ಸಂವಿಧಾನದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗಾಗಿನ 371 ಕಲಂ ಸೌಲಭ್ಯ ವ್ಯಾಪ್ತಿಯನ್ನು ವಿಜಾಪುರ ಜಿಲ್ಲೆಗೂ ವಿಸ್ತರಿಸಲಾಗುವುದು ಎಂದ ಮುಖ್ಯಮಂತ್ರಿಗಳ ಹೇಳಿಕೆ ಸ್ವಾಗತಾರ್ಹ.
ಸ್ವಾತಂತ್ರ್ಯಪೂರ್ವದಿಂದಲೂ ವಿಜಾಪುರ ಅಭಿವೃದ್ಧಿ ಕಾಣದ ಬರಡು ಬಯಲುಸೀಮೆಯ ಪ್ರದೇಶವಾಗಿದೆ. ಬಹುಪ್ರಮಾಣದಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳೇ ತುಂಬಿರುವ ಜಿಲ್ಲೆಯಲ್ಲಿ ಅನಕ್ಷರತೆ, ಬಡತನ, ಲಿಂಗಾನುಪಾತ, ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ.
ಡಾ. ಡಿ.ಎಂ. ನಂಜುಂಡಪ್ಪ ಸಮಿತಿ ವರದಿಯಲ್ಲಿ ಉಲ್ಲೇಖಿಸಿದಂತೆ ಎಲ್ಲ ತಾಲ್ಲೂಕುಗಳು ಅತ್ಯಂತ ಹಿಂದುಳಿದಿದ್ದು; ವಿಜಾಪುರ ಜಿಲ್ಲೆಯ ದುಃಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಆಲಮಟ್ಟಿ- ನಾರಾಯಣಪುರ ಜಲಾಶಯಕ್ಕೆ ಹೆಚ್ಚಿನ ಭೂಮಿಯನ್ನು ಜಿಲ್ಲೆಯ ರೈತರು ಕಳೆದುಕೊಂಡರೇ ವಿನಾ ಬಹುತೇಕ ನೀರಾವರಿ ಪ್ರಯೋಜನ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಭೂಮಿಗಳಿಗಾಯಿತು.
ಭೌಗೋಳಿಕವಾಗಿ, ಚಾರಿತ್ರಿಕವಾಗಿ, ಸಾಂಸ್ಕೃತಿಕ, ಹಿಂದುಳಿಯುವಿಕೆ ದೃಷ್ಟಿಯಿಂದಲೂ ವಿಜಾಪುರ ಜಿಲ್ಲೆ ಹೈ.ಕ. ಪ್ರದೇಶಗಳೊಂದಿಗೆ ಸರಿಸಾಟಿಯಾಗಿದೆ. 371 ಕಲಂನ ವಿಶೇಷ ಸವಲತ್ತು ಪ್ರಾಪ್ತಿಗೆ ಪ್ರಚಲಿತ ಹಿಂದುಳಿಯುವಿಕೆ ಆಧಾರವೇ ಹೊರತು ಇತಿಹಾಸ ದೃಷ್ಟಿಯಿಂದ ಅಲ್ಲ.
ಅಭಿವೃದ್ಧಿಯಲ್ಲಿ ಬೀದರ, ಕೊಪ್ಪಳ, ಬಳ್ಳಾರಿಗಿಂತ ಕೆಳಮಟ್ಟದಲ್ಲಿರುವ ವಿಜಾಪುರ ಜಿಲ್ಲೆಗೆ ಕಲಂ 371ಕಲಂನ ವಿಶೇಷ ಸ್ಥಾನಮಾನ ಅನಿವಾರ್ಯವಾಗಿದೆ. ಈ ದಿಶೆಯಲ್ಲಿ ಜಿಲ್ಲೆಯ ಎಲ್ಲ ಶಾಸಕರು ಧ್ವನಿ ಎತ್ತಬೇಕಾಗಿದೆ.
ಜಿಲ್ಲೆಯ ಸಂಘ-ಸಂಘಟನೆಗಳ ಸಹಕಾರವು ಅತ್ಯಗತ್ಯ. ಇಚ್ಛಾಶಕ್ತಿಯಿಂದ ಪ್ರಯತ್ನಿಸಬೇಕಾಗಿದೆ. ಶತಮಾನಗಳಿಂದಲೂ ನಿರ್ಲಕ್ಷ್ಯಗೊಳಗಾದ ವಿಜಾಪುರ ಜನತೆಯ ಬದುಕು ಹಸನಾಗಲಿ.