ಕುಷ್ಟಗಿ: ಸಂವಿಧಾನದ 371ನೇ ಕಲಂ ಗೆ ತಿದ್ದುಪಡಿ ತರುವ ಮೂಲಕ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದರೆ ಈ ಭಾಗದ ಜನರ ಬದುಕಿನ ಮಟ್ಟ ಸುಧಾರಿಸುತ್ತದೆ, ಈ ವಿಷಯ ಜನಸಾಮಾನ್ಯರವರೆಗೂ ತಲುಪಬೇಕಾದರೆ ಇದು ಕಟ್ಟೆಯ ಮೇಲಿನ ಸುದ್ದಿಯಾಗಬೇಕು ಎಂದು ಹೋರಾಟ ಸಮಿತಿ ಮುಖಂಡ ಅಲ್ಲಮಪ್ರಭು ಬೆಟದೂರು ಭಾನುವಾರ ಇಲ್ಲಿ ಹೇಳಿದರು.
ಈ ನಿಟ್ಟಿನಲ್ಲಿ ಇದೇ 24ರಂದು ಕರೆ ನೀಡಿರುವ ಬಂದ್ಗೆ ಸಂಬಂಧಿಸಿದಂತೆ ಬುತ್ತಿಬಸವೇಶ್ವರ ದೇವಸ್ಥಾನದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.
ಶಾಸಕ ಅಮರೇಗೌಡ ಬಯ್ಯಾಪೂರ ಮಾತನಾಡಿದರು. ಹೋರಾಟ ಸಮಿತಿ ಪ್ರಮುಖರಾದ ಎಚ್.ಎಸ್.ಪಾಟೀಲ, ಮಾಜಿ ಶಾಸಕ ಕೆ.ಶರಣಪ್ಪ, ಸರ್ಕಾರಿ ವಕೀಲ ಬಿ.ಎಸ್. ಪಾಟೀಲ, ಪತ್ರಕರ್ತ ಸಂತೋಷ ದೇಶಪಾಂಡೆ ಅನಿಸಿಕೆ ವ್ಯಕ್ತಪಡಿಸಿದರು.
ಮಾಜಿ ಶಾಸಕರಾದ ಹಸನ್ಸಾಬ್ ದೋಟಿಹಾಳ, ದೊಡ್ಡನಗೌಡ ಪಾಟೀಲ, ದೇವೇಂದ್ರಪ್ಪ ಬಳೂಟಗಿ, ಬಸವರಾಜ ಕುದರಿಮೋತಿ, ಜಿ.ಪಂ. ಮಾಜಿ ಸದಸ್ಯರಾದ ಮಾಲತಿ ನಾಯಕ್, ವಕೀಲರಾದ ಫಕೀರಪ್ಪ ಚಳಗೇರಿ, ಅಮರೇಗೌಡ ಪಾಟೀಲ, ಕರವೇ ಜಿಲ್ಲಾಧ್ಯಕ್ಷ ಬಸನಗೌಡ ಪೊಲೀಸ್ ಪಾಟೀಲ, ಅಮರೇಶ್ವರ ಶೆಟ್ಟರ್, ಕಸಾಪ ಅಧ್ಯಕ್ಷ ರವೀಂದ್ರ ಬಾಕಳೆ, ವೀರೇಶ ಬಂಗಾರ ಶೆಟ್ಟರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.