ಶಿರ್ವ: ಏಳು ವರ್ಷದ ಹಿಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲೆದಾಡುತ್ತಿದ್ದ ಜಾರ್ಖಂಡ್ ಮೂಲದ ಮಹಿಳೆ ಪೂರ್ಣ ಗುಣಮುಖರಾಗಿದ್ದು, ಶಂಕರಪುರದ ವಿಶ್ವಾಸದಮನೆಯಿಂದ ತನ್ನ ಕುಟುಂಬವನ್ನು ಸೇರಿಕೊಳ್ಳುವ ತವಕದಲ್ಲಿದ್ದಾರೆ.
ಸುಮಾರು 37ರ ಹರೆಯದ ಜಾರ್ಖಂಡ್ ಮೂಲದ ಮಾಧುರಿ ಎಂಬ ವಿವಾಹಿತ ಮಹಿಳೆ ಏಳು ವರ್ಷಗಳ ಹಿಂದೆ ಮಾನಸಿಕ ಅಸ್ವಸ್ಥೆಯಾಗಿದ್ದು, ಕೊರಂಗ್ರಪಾಡಿ- ಕಿನ್ನಿಮೂಲ್ಕಿಯ ಮುಖ್ಯರಸ್ತೆ ಬದಿಯಲ್ಲಿರುವ ಕಸದ ತೊಟ್ಟಿಯಿಂದ ಆಹಾರವನ್ನು ಹೆಕ್ಕಿ ತಿನ್ನುತ್ತಿದ್ದರು. ಸ್ಥಳೀಯರ ಮಾಹಿತಿ ಹಿನ್ನೆಲೆಯಲ್ಲಿ ವಿಶ್ವಾಸದ ಮನೆ ಅನಾಥಾಶ್ರಮದ ಮುಖ್ಯಸ್ಥ ಸುನಿಲ್ ಜಾನ್ ಡಿಸೋಜ ಹಾಗೂ ತಂಡದವರು ಅವರನ್ನು ಗಮನಿಸಿ ವಿಶ್ವಾಸದಮನೆ ಅನಾಥಾಶ್ರಮಕ್ಕೆ ಕರೆದುಕೊಂಡು ಬಂದು ಆಶ್ರಯ ನೀಡಿದರು.
ಸದಾ ನಗುತ್ತಿದ್ದ ಆಕೆ ತನ್ನಷ್ಟಕ್ಕೆ ಮಾತನಾಡುತ್ತಿದ್ದಳು. ಅನೇಕರು ಆಕೆಯನ್ನು ನೋಡಿ ಭಯಪಡುತ್ತಿದ್ದರು. ವೈದ್ಯರು ಆಕೆಯನ್ನು ಪರೀಕ್ಷಿಸಿ ಮಾನಸಿಕ ಅಸ್ವಸ್ಥರೆಂದು ದೃಢಪಡಿಸಿ ಚಿಕಿತ್ಸೆಯನ್ನು ಆರಂಭಿಸಿದರು. ಅದರ ನಂತರ ಮಾನಸಿಕ ಅಸ್ವಸ್ಥತೆಯಿಂದ ಗುಣಮುಖರಾಗಿ ವಿಶ್ವಾಸದ ಮನೆಯ ಆಶ್ರಯದಲ್ಲಿ ಅನೇಕ ವಿಧವಾದ ಕೆಲಸಗಳನ್ನು ಕಲಿತುಕೊಂಡರು. ಆಕೆ ಟೈಲರಿಂಗ್, ತೋಟಗಾರಿಕೆ, ಅಡುಗೆ ಮನೆಯಲ್ಲಿ ಸಹಾಯಕಿಯಾಗಿದ್ದರು.
ಇತ್ತೀಚೆಗೆ ಸುಮಾರು 30 ದಿನಗಳ ಹಿಂದೆ ಅವರು ಹೇಳಿದ ವಿಳಾಸಕ್ಕೆ ಪತ್ರ ಬರೆಯಲಾಗಿತ್ತು. ಈ ಪತ್ರವನ್ನು ಜಾರ್ಖಂಡ್ನ ಅಂಚೆ ಪೇದೆ ಮನೆ ಹುಡುಕಿಕೊಂಡು ಕೊಟ್ಟಿದ್ದರಿಂದ ಇದೀಗ ಆಕೆಯ ತಂದೆ ಸಜನ್ ಮಹತೋ ಮತ್ತು ಚಿಕ್ಕಪ್ಪ ಮೆದಲಾಲ್ ಮಹತೋ ಜಾರ್ಖಂಡ್ನಿಂದ ಮಾಧುರಿಯನ್ನು ಹುಡುಕಿಕೊಂಡು ವಿಶ್ವಾಸದಮನೆಗೆ ಬಂದಿದ್ದಾರೆ. ಆಕೆಯನ್ನು ಜಾರ್ಖಂಡ್ಗೆ ಕರೆದುಕೊಂಡು ಹೋಗಲು ವಿಶ್ವಾಸದಮನೆಯ ಪಾಸ್ಟರ್ ಸುನೀಲ್ ಜಾನ್ ಡಿಸೋಜ ಅವರಲ್ಲಿ ಮನವಿ ಮಾಡಿದ್ದರು.
5ದಿನಗಳ ರೈಲ್ವೆ ಪ್ರಯಾಣವಿರುವುದರಿಂದ ಮಾಧುರಿಯನ್ನು ವಿಶ್ವಾಸದಮನೆಯವರು ಸ್ವಂತ ಖರ್ಚಿನಿಂದ ಕುಟುಂಬದೊಂದಿಗೆ ಜಾರ್ಖಂಡ್ಗೆ ಕಳುಹಿಸಿಕೊಟ್ಟಿದ್ದಾರೆ. ಜಾರ್ಖಂಡ್ನ ಕೃಷಿ ಮನೆತನದ ಮಾಧುರಿ: ಜಾರ್ಖಂಡ್ನ ಕೃಷಿ ಮನೆತನದ ಮಾಧುರಿ 7 ವರ್ಷಗಳ ಹಿಂದೆ ಮಾನಸಿಕ ಅಸ್ವಸ್ಥತೆಯಿಂದ, ತನ್ನ ಗಂಡನ ಮನೆಯಿಂದ ಒಂದು ಮಗುವಿನೊಂದಿಗೆ ಮಧ್ಯ ರಾತ್ರಿಯಲ್ಲಿ ಮನೆಬಿಟ್ಟು ಹೋಗಿದ್ದರು.
ಮನೆಯವರು ಅನೇಕ ಕಡೆಗಳಲ್ಲಿ ಹುಡುಕಾಡಿದರೂ ಅವರ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ. ನಂತರ ತನ್ನ ಮಗಳು ಸಿಗುತ್ತಾರೆಂಬ ಆಸೆಯನ್ನು ಬಿಟ್ಟುಬಿಟ್ಟಿದ್ದರು. ಅವರು ಮನೆಬಿಟ್ಟು ರಸ್ತೆಯಲ್ಲಿ ಮಗುವಿನೊಂದಿಗೆ ಅಲೆದಾಡುತ್ತಿರುವಾಗ ಯಾರೋ ಒಬ್ಬರು ಇವರಿಗೆ ಒಂದು ದಿನ ಆಶ್ರಯಕೊಟ್ಟು ಸಣ್ಣ ಮಗುವನ್ನು ನೀನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿ ನಾವು ಸಾಕುತ್ತೇವೆ ಎಂದು ತೆಗೆದುಕೊಂಡರೆಂದು ಮಾಧುರಿ ತಿಳಿಸಿದ್ದಾರೆ. ಮಾಧುರಿಗೆ ಮದುವೆಯಾಗಿ 3 ಮಕ್ಕಳು ಇದ್ದಾರೆ. ಅದರಲ್ಲಿ 2 ಹೆಣ್ಣು ಮಕ್ಕಳಿಗೆ ಮದುವೆಯಾಗಿ ಮಕ್ಕಳಿದ್ದಾರೆ ಮತ್ತು ಮಗ ಕೆಲಸಮಾಡುತ್ತಾ ಇದ್ದಾನೆ ಎಂದು ತಂದೆ ಸಜನ್ ಮಹತೋ ತಿಳಿಸಿದ್ದಾರೆ.
-ಪ್ರಕಾಶ್ ಸುವರ್ಣ ಕಟಪಾಡಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.