ಹಾನಗಲ್: ಹಾನಗಲ್ ತಾಲ್ಲೂಕಿನ ಕಾಮನಹಳ್ಳಿ ಗ್ರಾಮದ ಸಮೀಪದ ಹೊಲದಲ್ಲಿನ ಮಾತೋಶ್ರೀ ಎಮು ಫಾರ್ಮ್ನಲ್ಲಿ 95 ಎಮುಗಳು ವಿಷ ಪ್ರಾಶನದಿಂದ ಸಾವನ್ನಪ್ಪಿವೆ.
ಎಮುಗಳಿಗೆ ಆಹಾರ ಮತ್ತು ನೀರು ನೀಡುತ್ತಿದ್ದ ತೊಟ್ಟಿಯಲ್ಲಿ ಮಂಗಳವಾರ ರಾತ್ರಿ ದುಷ್ಕರ್ಮಿಗಳು ವಿಷ ಬೆರೆಸಿದ್ದರಿಂದ ಈ ಫಾರ್ಮನಲ್ಲಿದ್ದ 100 ಎಮುಗಳ ಪೈಕಿ 93 ಎಮುಗಳು ಬುಧವಾರ ಸಾವನ್ನಪ್ಪಿವೆ ಎನ್ನ ಲಾಗಿದ್ದು, ಅಸ್ವಸ್ಥಗೊಂಡಿದ್ದ ಎರಡು ಎಮುಗಳು ಗುರುವಾರ ಮೃತಪಟ್ಟಿವೆ. ಫಾರ್ಮ್ ಕಾವಲುಗಾರನ ಕಣ್ತಪ್ಪಿಸಿ ಈ ಕೃತ್ಯ ಎಸಗಲಾಗಿದೆ ಎಂದು ಫಾರ್ಮ್ ಮಾಲೀಕರು ದೂರಿದ್ದಾರೆ.
ಆಸ್ಟ್ರೇಲಿಯಾ ಮೂಲದ ಈ ದೈತ್ಯ ಎಮುಗಳ ಸಾಕಾಣಿಕೆ ಈಚೆಗೆ ದೇಶದಲ್ಲಿ ಒಂದು ಉದ್ಯಮವಾಗಿದೆ. ಕಳೆದ ಎರಡೂವರೆ ವರ್ಷದ ಹಿಂದೆ ಹಾನಗಲ್-ಮಂತಗಿ ರಸ್ತೆಯ ಕಾಮನ ಹಳ್ಳಿ ಗ್ರಾಮದ ಹೊರಭಾಗದಲ್ಲಿನ ತಮ್ಮ ಸ್ವಂತ ಜಮೀನಿನಲ್ಲಿ ಎಮು ಸಾಕಾಣಿಕೆ ಮೂಲಕ ಈ ಭಾಗದಲ್ಲಿ ನೂತನ ಕೃಷಿ ಉದ್ಯಮಕ್ಕೆ ಚಾಲನೆ ನೀಡಿದ್ದ ಪದವೀಧರ ಯುವಕ ರಾಮ ಚಂದ್ರ ಹೆಗಡೆ ಗಮನ ಸೆಳೆದಿದ್ದರು.
ಎಮು ಸಾಕಾಣಿಕೆಯ ಫಾರ್ಮ್ನ ಎಲ್ಲ ನಿಯಮಗಳನ್ನು ವ್ಯವಸ್ಥಿತವಾಗಿ ಮಾಡಿಕೊಂಡು 6 ತಿಂಗಳ ವಯಸ್ಸಿನ ನೂರು ದೈತ್ಯ ಪಕ್ಷಿಗಳನ್ನು ಸಾಕ ತೊಡಗಿದ್ದರು. ಈ ಉದ್ಯಮದಿಂದ ಆಕರ್ಷಿತಗೊಂಡ ಸುತ್ತಲಿನ ಆಸಕ್ತರು ಈ ಫಾರ್ಮ್ ಸಂದರ್ಶಿಸಿ ಸಲಹೆ ಪಡೆಯುತ್ತಿದ್ದರು. ಸುಮಾರು ಮೂರು ವರ್ಷ ಪ್ರಾಯಕ್ಕೆ ಬಂದಿದ್ದ ಎಮು ಪಕ್ಷಿಗಳ ಸಾವಿನಿಂದ ಈಗ ರೂ. 15 ಲಕ್ಷಕ್ಕೂ ಅಧಿಕ ಹಾನಿಗೆ ರಾಮಚಂದ್ರ ಹೆಗಡೆ ಒಳಗಾಗಿದ್ದಾರೆ.
ಫಾರ್ಮ್ಗೆ ಭೇಟಿ ನೀಡಿದ್ದ ಪೊಲೀಸ್ ಇಲಾಖೆ ಹಾಗೂ ವಿಮೆ ಕಂಪೆನಿ, ಎಸ್.ಬಿ.ಐ ಅಧಿಕಾರಿಗಳು ಪರಿಶೀಲನೆ ನಡೆಸಿದರು.