ನವದೆಹಲಿ (ಪಿಟಿಐ): ಕುಖ್ಯಾತ ದಂತಚೋರ ವೀರಪ್ಪನನ ನಾಲ್ವರು ಸಹಚರರಿಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಗೆ ಸುಪ್ರೀಂಕೋರ್ಟ್ ಬುಧವಾರ ತಡೆ ನೀಡಿದೆ.
ಬೆಳಗಾವಿ ಜೈಲಿನಲ್ಲಿರುವ ಸೈಮನ್, ಮೀಸೆಕಾರ ಮಾದಯ್ಯ, ಬಲವೇಂದ್ರ ಮತ್ತು ವೀರಪ್ಪನ್ನ ಹಿರಿಯ ಸೋದರ ಜ್ಞಾನಪ್ರಕಾಶ್ ಅವರು ಈ ತಡೆಯಾಜ್ಞೆಯಿಂದ ಇನ್ನು ಕೆಲ ದಿನಗಳ ಮಟ್ಟಿಗೆ ನೇಣು ಶಿಕ್ಷೆಯಿಂದ ಪಾರಾಗಲಿದ್ದಾರೆ. ಫೆಬ್ರುವರಿ 13 ರಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಈ ನಾಲ್ವರ ಕ್ಷಮಾದಾನದ ಅರ್ಜಿಯನ್ನು ತಿರಸ್ಕರಿಸಿದ್ದರು. ಹೀಗಾಗಿ ಯಾವುದೇ ಕ್ಷಣದಲ್ಲಿ ಕೊರಳಿಗೆ ಉರುಳು ಬೀಳಬಹುದೆಂದು ಹೇಳಲಾಗಿತ್ತು.
ತಮ್ಮ ಕ್ಷಮಾದಾನದ ಅರ್ಜಿಯನ್ನು ಇತ್ಯರ್ಥಪಡಿಸುವುದಕ್ಕೆ 9 ವರ್ಷದಷ್ಟು ವಿಳಂಬ ಮಾಡಿದ್ದರಿಂತ ತಮ್ಮ ಶಿಕ್ಷೆಯನ್ನು ಜೀವಾವಧಿಗೆ ಇಳಿಸುವಂತೆ ಕೋರಿ ಈ ನಾಲ್ವರು ಅಪರಾಧಿಗಳು ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಅವರ ನೇತೃತ್ವದ ನ್ಯಾಯಪೀಠವು ಈ ತಡೆಯಾಜ್ಞೆ ನೀಡಿದೆ.
ಇಂತಹುದೆ ಮತ್ತೊಂದು ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಜಿ.ಎಸ್. ಸಿಂಘ್ವಿ ಅವರ ನೇತೃತ್ವದ ನ್ಯಾಯಪೀಠವು ತನ್ನ ಆದೇಶವನ್ನು ಕಾಯ್ದಿರಿಸಿದೆ. ಮರಣದಂಡನೆ ಶಿಕ್ಷೆಗೆ ಗುರಿಯಾದವರ ಕ್ಷಮಾದಾನದ ಅರ್ಜಿಯನ್ನು ಇತ್ಯರ್ಥಪಡಿಸುವಲ್ಲಿ ವಿಳಂಬವಾದರೆ ಅಂತಹ ಅಪರಾಧಿಗಳ ಶಿಕ್ಷೆಯ ಪ್ರಮಾಣದಲ್ಲಿ ಇಳಿಕೆ ಮಾಡಬೇಕೆ ಎಂಬ ಅರ್ಜಿಯ ಬಗೆಗೆ ನ್ಯಾಯಮೂರ್ತಿ ಸಿಂಘ್ವಿ ಅವರು ವಿಚಾರಣೆ ನಡೆಸುತ್ತಿದ್ದಾರೆ.
ಹೀಗಾಗಿ ನ್ಯಾಯಪೀಠ ಇವರ ಶಿಕ್ಷೆಯ ಜಾರಿಗೆ ತಡೆಯಾಜ್ಞೆ ನೀಡಿದೆ.