ಚೆನ್ನೈ (ಪಿಟಿಐ/ಐಎಎನ್ಎಸ್): ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ಆಡಳಿತ ಪುನರ್ರಚನೆ ಸಂಬಂಧ ಲಾರ್ಡ್ ವೂಲ್ಫ್ ನೀಡಿರುವ ವರದಿಯ ಪ್ರಮುಖ ಅಂಶಗಳನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿರಸ್ಕರಿಸಿದೆ.
ವೂಲ್ಫ್ ಸಾರಥ್ಯದ ಐಸಿಸಿ ಸ್ವತಂತ್ರ ಆಡಳಿತ ಪರಿಶೀಲನಾ ಸಮಿತಿ ಈ ಶಿಫಾರಸು ಮಾಡಿದೆ. ಇದರ ಪ್ರಕಾರ ಐಸಿಸಿ ಆಡಳಿತ ಹಾಗೂ ಕಾರ್ಯವೈಖರಿ ಸ್ವರೂಪದಲ್ಲಿ ಬದಲಾವಣೆಗೆಯಾಗಲಿದ್ದು, ಸಮಿತಿಯ ಅಧ್ಯಕ್ಷರ ಅಧಿಕಾರಕ್ಕೆ ಕೊಕ್ಕೆ ಬೀಳಲಿದೆ. ಜೊತೆಗೆ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಬಿಸಿಸಿಐನ ಪಾರಮ್ಯಕ್ಕೂ ಧಕ್ಕೆಯಾಗುವ ಸಾಧ್ಯತೆ ಇದೆ.
`ವೂಲ್ಫ್ ಮಾಡಿರುವ ಶಿಫಾರಸುಗಳ ಕುರಿತು ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು. ಆದರೆ ವೂಲ್ಫ್ ಪ್ರಸ್ತಾಪಿಸಿರುವ ಕೆಲ ಅಂಶಗಳನ್ನು ಒಪ್ಪಲು ಸಾಧ್ಯವಿಲ್ಲ. ಇದಕ್ಕೆ ಕಾರ್ಯಕಾರಿ ಸಮಿತಿ ಒಪ್ಪಿಗೆ ನೀಡಿಲ್ಲ. ಪ್ರಮುಖವಾಗಿ ಆಡಳಿತದಲ್ಲಿ ಮಾಡಿರುವ ಬದಲಾವಣೆಗಳನ್ನು ತಿರಸ್ಕರಿಸಲಾಗಿದೆ~ ಎಂದು ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ತಿಳಿಸಿದರು.
ವೂಲ್ಫ್ ವರದಿ ಪ್ರಕಾರ ಐಸಿಸಿ ಕಾರ್ಯನಿರ್ವಾಹಕ ಮಂಡಳಿಯಲ್ಲಿ ಪೂರ್ಣ ಬದಲಾವಣೆ ಆಗಲಿದ್ದು, ಹೆಚ್ಚಿನ ಸ್ವಾತಂತ್ರ್ಯ ನೀಡಲಾಗುತ್ತದೆ. ಜೊತೆಗೆ ಪಾರದರ್ಶಕ ಆಡಳಿತಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಹತ್ತು ದಿನಗಳ ಹಿಂದೆ ಅವರು ಈ ವರದಿ ನೀಡಿದ್ದರು.
ಆದರೆ ವರದಿಯಲ್ಲಿ ಯಾವ ಅಂಶಗಳನ್ನು ತಿರಸ್ಕರಿಸಲಾಗಿದೆ ಎಂಬುದರ ಬಗ್ಗೆ ಶ್ರೀನಿವಾಸನ್ ಹೆಚ್ಚಿನ ವಿವರಣೆ ನೀಡಲಿಲ್ಲ.
ತನಿಖೆ ಇಲ್ಲ: ಆಸ್ಟ್ರೇಲಿಯಾ ಪ್ರವಾಸದ ವೇಳೆ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಕಂಡ ಭಾರತ ತಂಡದ ಆಟಗಾರರ ಪ್ರದರ್ಶನದ ಬಗ್ಗೆ ಬಿಸಿಸಿಐ ಯಾವುದೇ ತನಿಖೆ ನಡೆಸುವುದಿಲ್ಲ ಎಂದು ಶ್ರೀನಿವಾಸನ್ ಸ್ಪಷ್ಟಪಡಿಸಿದ್ದಾರೆ. ನಾಲ್ಕು ಪಂದ್ಯಗಳ ಈ ಸರಣಿಯಲ್ಲಿ ಭಾರತ 0-4ರಲ್ಲಿ ಸೋಲು ಕಂಡಿತ್ತು. ಹಾಗಾಗಿ ಎಂ.ಎಸ್.ದೋನಿ ಪಡೆ ಟೀಕಾ ಪ್ರಹಾರಕ್ಕೆ ಗುರಿಯಾಗಿತ್ತು.