ಬೆಂಗಳೂರು: `ಆತ್ಮಚರಿತ್ರೆಗಳಿಂದ ನಾಡಿನ ಸಾಂಸ್ಕೃತಿಕ ಇತಿಹಾಸ ರಚನೆಯಾದಂತೆಯೇ ಸರಿ. ಸಾಂಸ್ಕೃತಿಕ ವ್ಯಕ್ತಿಯೊಬ್ಬನ ಆತ್ಮಚರಿತ್ರೆ ಎಂದರೆ ಆ ಕಾಲದ ಇತಿಹಾಸವೇ ಆಗಿರುತ್ತದೆ~ ಎಂದು ಸಾಹಿತಿ ಪ್ರೊ.ಕೆ.ಮರುಳಸಿದ್ದಪ್ಪ ನುಡಿದರು.
ಬರಹ ಪಬ್ಲಿಷಿಂಗ್ ಹೌಸ್ ಹೊರತಂದಿರುವ ವೃತ್ತಿರಂಗಭೂಮಿ ಕಲಾವಿದ ದಿ. ಬಿ.ಎನ್. ಚಿನ್ನಪ್ಪ ಅವರ ಆತ್ಮಕಥನ `ಬಣ್ಣದ ಬೆಳಕು~ ಪುಸ್ತಕವನ್ನು ನಗರದ ನಯನ ಸಭಾಂಗಣದಲ್ಲಿ ಭಾನುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.
`ನಟನಾಗಿ ಚಿನ್ನಪ್ಪನವರು ತಮ್ಮ ವೃತ್ತಿ ಬದುಕಿನ ಎಳುಬೀಳುಗಳನ್ನು ಬರೆಯುತ್ತಲೇ ಆ ಕಾಲದ ಅನೇಕ ವೃತ್ತಿ ಕಂಪನಿಗಳ ಚರಿತ್ರೆಯನ್ನು ಬರೆದುಕೊಟ್ಟಿದ್ದಾರೆ~ ಎಂದು ಅವರು ಶ್ಲಾಘಿಸಿದರು.
ಕೃತಿ ಕುರಿತು ಮಾತನಾಡಿದ ಲೇಖಕ ಡಾ.ಕೆ.ಪುಟ್ಟಸ್ವಾಮಿ, `ಈ ಕೃತಿ ಅವರ ಬದುಕಿನ ಪುಟಗಳನ್ನು ತೆರೆದಿಡುವುದಲ್ಲದೆ, ತುಂಬಾ ನೋವಿನ ಸಂದರ್ಭಗಳಲ್ಲೂ ಅವರ ಛಲವನ್ನು, ರಂಗಭೂಮಿಯ ಬಗ್ಗೆ ಅವರು ಇರಿಸಿಕೊಂಡಿದ್ದ ಅಚಲವಾದ ದೃಢ ನಿಲುವುಗಳನ್ನು ಪ್ರತಿಬಿಂಬಿಸುತ್ತದೆ~ ಎಂದರು. ವಿಮರ್ಶಕ ಪ್ರೊ.ಎಂ.ಎಚ್.
ಕೃಷ್ಣಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, `ಎಲ್ಲ ಬಗೆಯ ಸಾಂಸ್ಕೃತಿಕ ಮುಖಗಳನ್ನು ಹೊಂದಿದ್ದರೂ ಅಂತಹ ಚಲನಶೀಲ ಚಹರೆಗಳನ್ನು ಕಳೆದುಕೊಂಡಿರುವ ಬೆಂಗಳೂರಿನ ಒಂದು ಕಾಲದ ಉತ್ಸಾಹ ವೈಭವಗಳು ಈ ಕೃತಿಯಲ್ಲಿ ಪಡಿಮೂಡಿವೆ. ಇಂತಹ ಬರಹಗಳು ಜನರಲ್ಲಿ ಜಾಗೃತಿ ಮೂಡಿಸುವ ದಿವ್ಯ ಔಷಧಿಗಳಿದ್ದಂತೆ~ ಎಂದರು.
ಗಾಂಧಿ ಸಾಹಿತ್ಯ ಸಂಘದ ಅಧ್ಯಕ್ಷ ಡಾ.ಹೊ.ಶ್ರಿನಿವಾಸಯ್ಯ, ಚಿನ್ನಪ್ಪನವರ ಪುತ್ರ ಬಿ.ಎನ್. ಗುರುಮೂರ್ತಿ, ಪ್ರಕಾಶಕ ಡಾ.ಎಂ.ಬೈರೇಗೌಡ ಉಪಸ್ಥಿತರಿದ್ದರು.