ಉಡುಪಿ: ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆಯ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹೋರಾಟ ತೀವ್ರಗೊಳಿಸಿದ್ದು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.
ನಗರದ ಸರ್ವೀಸ್ ಬಸ್ ನಿಲ್ದಾಣದ ಎದುರು ಜಮಾಯಿಸಿದ್ದ ನಗರದ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಹಿತವನ್ನು ಬಲಿ ನೀಡಲು ಮುಂದಾಗಿರುವ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಕಾಯ್ದೆ ಜಾರಿಗೆ ಬಂದರೆ ಬಡ, ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೃತ್ತಿ ಶಿಕ್ಷಣ ಪಡೆಯಲು ಸಾಧ್ಯವಾಗದು. ದುಬಾರಿ ಶುಲ್ಕವನ್ನು ಭರಿಸುವುದು ಅಸಾಧ್ಯವಾಗಲಿದ್ದು ವೃತ್ತಿ ಶಿಕ್ಷಣದ ಆಸೆಯನ್ನೇ ಬಿಡಬೇಕಾಗುತ್ತದೆ. ಸಾಮಾಜಿಕ ನ್ಯಾಯ ಒದಗಿಸಲು ವಿಫಲವಾಗುವ ಮತ್ತು ಶೈಕ್ಷಣಿಕ ಹಕ್ಕನ್ನು ಮೊಟಕುಗೊಳಿಸುವ ಸರ್ಕಾರದ ನೀತಿ ಖಂಡನೀಯ ಎಂದು ಹೇಳಿದರು.
ಈ ಕಾಯ್ದೆ ಜಾರಿಯಾದರೆ ಬಹುತೇಕ ಸರ್ಕಾರಿ ಕೋಟದ ಸೀಟುಗಳು ಖಾಸಗಿ ಕಾಲೇಜುಗಳ ಪಾಲಾಗಲಿವೆ. ಖಾಸಗಿ ಅನುದಾನರಹಿತ ಕಾಲೇಜಿನಲ್ಲಿ ಒಂದೇ ಒಂದು ಸರ್ಕಾರಿ ಕೋಟದ ಸೀಟು ಇರುವುದಿಲ್ಲ. ತಮ್ಮ ಪಾಲಿನ ಸೀಟುಗಳನ್ನು ಭರ್ತಿ ಮಾಡಲು ಕಾಮೆಡ್– ಕೆಗೆ ಅನುಮತಿ ನೀಡಿದರೆ ಇನ್ನಷ್ಟು ಅಕ್ರಮ ಎಸಗುವ ಸಾಧ್ಯತೆ ಇದೆ.
ಸರ್ಕಾರ ರಚಿಸುವ ಸಮಿತಿ ಪ್ರವೇಶ ಶುಲ್ಕ ನಿಗದಿ ಮಾಡುವುದರಿಂದ ಸರ್ಕಾರದ ನಿಯಂತ್ರಣ ಸಂಪೂರ್ಣವಾಗಿ ತಪ್ಪಲಿದೆ. ಆಯಾ ಕಾಲೇಜುಗಳ ಮೂಲ ಸೌಕರ್ಯಕ್ಕೆ ಅನುಗುಣವಾಗಿ ಶುಲ್ಕ ನಿಗದಿ ಮಾಡುವುದರಿಂದ ಅಸಮಾನತೆ ಹೆಚ್ಚಾಗಲಿದೆ. ಬಡವರು ಉತ್ತಮ ಸೌಲಭ್ಯಗಳಿರುವ ಕಾಲೇಜುಗಳಲ್ಲಿ ಕಲಿಯಲು ಸಾಧ್ಯವಾಗುವುದಿಲ್ಲ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
ಎಬಿವಿಪಿ ಮುಖಂಡ ಶಶಿರ, ವಿದ್ಯಾರ್ಥಿ ಮುಖಂಡರಾದ ಶ್ರೀನಿವಾಸ ಪೈ, ಶ್ರೀನಿವಾಸ, ಸುಹಾಸ್, ವಿಶಾಲ್, ಅರ್ಜುನ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.