ಬೆಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಚಂದ್ರಗುತ್ತಿಯ ರೇಣುಕಾಂಬ ದೇವಸ್ಥಾನ, ಗಾಣಗಾಪುರದ ದತ್ತಾತ್ರೇಯಸ್ವಾಮಿ ದೇವಸ್ಥಾನ ಸೇರಿದಂತೆ ರಾಜ್ಯದ ಮುಜರಾಯಿ ಇಲಾಖೆಯ ಅಧೀನಕ್ಕೆ ಒಳಪಟ್ಟಿರುವ ಒಟ್ಟು 110 ದೇವಸ್ಥಾನಗಳ ಮಾಹಿತಿ ಈಗ ವೆಬ್ಸೈಟ್ನಲ್ಲಿ ಲಭ್ಯ.
ದೇವಸ್ಥಾನಗಳಲ್ಲಿ ಸಲ್ಲಿಸಲು ಅವಕಾಶ ಇರುವ ವಿವಿಧ ಪೂಜೆಗಳು, ದೇವಸ್ಥಾನದ ಇತಿಹಾಸ, ಹತ್ತಿರದ ವಸತಿ ಗೃಹಗಳು, ಬ್ಯಾಂಕ್ ಶಾಖೆಗಳ ಮಾಹಿತಿ ಕೂಡ ಲಭ್ಯ. ವಿವಿಧ ದೇವಸ್ಥಾನಗಳ ಮಾಹಿತಿ ಒಳಗೊಂಡ ವೆಬ್ಸೈಟ್ಗೆ ((www.http://karnatakatemples.kar.nic.in) ) ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಗೃಹ ಕಚೇರಿ `ಕೃಷ್ಣಾ~ದಲ್ಲಿ ಬುಧವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ಬಿ.ಜಿ. ನಂದಕುಮಾರ್, `ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ ಮತ್ತು ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಐಎಸ್ಒ ಪ್ರಮಾಣಪತ್ರ ದೊರೆತಿದೆ~ ಎಂದು ಪ್ರಕಟಿಸಿದರು.
ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಿಗೆ ದೇಣಿಗೆ ನೀಡಲು, ವಿವಿಧ ಸೇವೆಗಳಿಗೆ ಹಣ ಸಂದಾಯ ಮಾಡುವ ಸೌಲಭ್ಯವನ್ನು ಇಲಾಖೆಯ ಪ್ರಧಾನ ಕಚೇರಿಯಲ್ಲಿ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ದೇವಸ್ಥಾನಗಳ ಮಾಹಿತಿ ಒಳಗೊಂಡ ಪುಸ್ತಕವನ್ನು ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.
ಸಚಿವ ವರ್ತೂರು ಪ್ರಕಾಶ್, ಶಾಸಕ ಕೃಷ್ಣಯ್ಯ ಶೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.