ಶಿವಮೊಗ್ಗ: ಗ್ರಾಮೀಣ ಕೃಪಾಂಕ ಆಧಾರಿತ ನೇಮಕಾತಿ ಹೊಂದಿದ ಶಿಕ್ಷಕರು ಮತ್ತು ನೌಕರರ ಸೇವೆಗೆ ಅನುಗುಣವಾಗಿ ನೀಡಿರುವ ವೇತನ ಹೆಚ್ಚಳವನ್ನು ಕಡಿತಗೊಳಿಸುವ ಕ್ರಮವನ್ನು ಖಂಡಿಸಿ ಜಿಲ್ಲಾ ಗ್ರಾಮೀಣ ಕೃಪಾಂಕ ಶಿಕ್ಷಕರ ಮತ್ತು ನೌಕರರ ವೇದಿಕೆ ಸದಸ್ಯರು ಮಂಗಳವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಗ್ರಾಮೀಣ ಕೃಪಾಂಕ ಸೌಲಭ್ಯದ ಅಡಿ ಸಾವಿರಾರು ಶಿಕ್ಷಕರು ನೇಮಕಗೊಂಡಿದ್ದಾರೆ. ಅವರೆಲ್ಲರಿಗೂ 1998ರಲ್ಲಿನ ನೇಮಕಾತಿ ದಿನಾಂಕದಿಂದ ವೇತನ ನಿಗದಿಗೊಳಿಸಿದೆ. ಆದರೆ, ಈಗ ಆ ವೇತನಕ್ಕೆ ತಾವು ಅರ್ಹರಲ್ಲ ಎಂದು , ನೀಡಲಾಗಿರುವ ಹೆಚ್ಚಳದ ವೇತನ ಕಡಿತಗೊಳಿಸಲು ಸರ್ಕಾರ ಮುಂದಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಆಡಳಿತ ಸುಧಾರಣೆ ಮತ್ತು ಸಿಬ್ಬಂದಿ ಇಲಾಖೆಯಲ್ಲಿ ವಿಶೇಷ ನೇಮಕಾತಿ ನಿಯಮಾವಳಿ 2003ಕ್ಕೆ ತಿದ್ದುಪಡಿ ಮಾಡುವ ಮೂಲಕ ಗ್ರಾಮೀಣ ಕೃಪಾಂಕ ಆಧಾರಿತ ನೌಕರರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಪದಾಧಿಕಾರಿಗಳಾದ ಶಿವಕುಮಾರಸ್ವಾಮಿ, ರಾಘವೇಂದ್ರ, ಶಿವನಗೌಡ, ರಮೇಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.