ಬಳ್ಳಾರಿ: ವೈಕುಂಠ ಏಕಾದಶಿ ದಿನದಂದು ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಲಡ್ಡು ಪ್ರಸಾದ ಸ್ವೀಕರಿಸಿದರೆ ಮುಕ್ತಿ ದೊರಕುತ್ತದೆ ಎಂಬ ಭಾವನೆ ಭಕ್ತರಲ್ಲಿದೆ. ಇದಕ್ಕಾಗಿ ಬಳ್ಳಾರಿಯ ರಾಮೇಶ್ವರಿ ನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ದಿನವಾದ ಗುರುವಾರ (ಜ. 5) ಭಕ್ತರಿಗೆ ಉಚಿತ ಪ್ರಸಾದವಾಗಿ ವಿತರಿಸಲು ಒಟ್ಟು 40 ಸಾವಿರ ಲಡ್ಡುಗಳನ್ನು ತಯಾರಿಸಲಾಗುತ್ತಿದೆ.
ತಿರುಪತಿಗೆ ತೆರಳಲು ಆಗದ ಭಕ್ತರು ತಮ್ಮ ಊರುಗಳಲ್ಲೇ ಇರುವ ವೆಂಕಟೇಶ್ವರ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆಯುತ್ತಾರೆ. ಅಂದು ಆ ದೇವಸ್ಥಾನದಲ್ಲಿ ಅನ್ನಮಯ್ಯ ಲಡ್ಡು ಪ್ರಸಾದ ಸ್ವೀಕರಿಸಿದರೆ ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಮನೆಮಾಡಿದೆ.
ಈ ದಿಸೆಯಲ್ಲಿ ಬಳ್ಳಾರಿಯ ರಾಮೇಶ್ವರಿ ನಗರದ ವೆಂಕಟೇಶ್ವರ ದೇವಸ್ಥಾನದ ಆಡಳಿತ ಮಂಡಳಿಯಿಂದ ಪ್ರತಿ ವರ್ಷವೂ ತಿರುಪತಿ ಮಾದರಿಯ ಲಡ್ಡುಗಳನ್ನು ಸಿದ್ಧಪಡಿಸಿ ಹಂಚಲಾಗುತ್ತದೆ.