ರಾಮನಗರ: ವೈದ್ಯ ಪದ್ಧತಿಯನ್ನು ವೃತ್ತಿಯೆಂದು ಪರಿಗಣಿಸದೆ ಇದೊಂದು ಸೇವಾ ಕ್ಷೇತ್ರವೆಂದು ಪರಿಗಣಿಸಬೇಕು. ಯಾವುದೇ ಕಾರಣಕ್ಕು ವೃತ್ತಿಯನ್ನು ವ್ಯಾಪಾರೀಕರಣ ಮಾಡಬಾರದು ಎಂದು ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಎನ್.ರುದ್ರಮುನಿ ತಿಳಿಸಿದರು.
ನಗರದ ಹೋಲಿ ಕ್ರಸೆಂಟ್ ಆಂಗ್ಲಶಾಲೆಯಲ್ಲಿ ರೋಟರಿ ಸಂಸ್ಥೆ ವತಿಯಿಂದ ಇತ್ತೀಚೆಗೆ ನಡೆದ ವೈದ್ಯರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯ ವೃತ್ತಿಯಲ್ಲಿ ಹಣ ಗಳಿಸುವುದೇ ಮುಖ್ಯ ಗುರಿಯಾಗಬಾರದು. ಸೇವೆ ಮಾಡುವ ಮನಸ್ಸು ಇರಬೇಕು. ವೈದ್ಯರನ್ನು ಜನರು ದೇವರಂತೆ ಭಾವಿಸಿದ್ದಾರೆ. ಆದ್ದರಿಂದ ವೈದ್ಯರು ಇದಕ್ಕೆ ಬದ್ಧರಾಗಿ ಸೇವೆಯನ್ನು ವಿನಿಯೋಗಿಸಬೇಕು ಎಂದು ಕಿವಿಮಾತು ಹೇಳಿದರು.
ವೈದ್ಯರು ಜೀವಗಳ ಜೊತೆ ಕರ್ತವ್ಯ ನಿರ್ವಹಿಸುವಂತವರು. ಆದ್ದರಿಂದ ಪ್ರಾಮಾಣಿಕತೆ, ದಕ್ಷತೆ, ಕರ್ತವ್ಯದ ಬಗೆಗೆ ಉತ್ಸಾಹ ಇರಬೇಕು. ಈ ನಿಟ್ಟಿನಲ್ಲಿ ಸೇವಾ ಪ್ರವೃತ್ತಿಯನ್ನು ರೂಢಿಸಿಕೊಳ್ಳಬೇಕು. ಕೇವಲ ವೈದ್ಯ ವೃತ್ತಿಯ ಪದವಿಗಳಿಸಿದರೆ ಸಾಲದು, ಪದವಿಯ ಜೊತೆಗೆ ಮಾನವೀಯತೆಯನ್ನು ರೂಢಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ಹೊಂದಬೇಕು. ವೃತ್ತಿಯಲ್ಲಿ ಕಾಳಜಿ, ಪ್ರೀತಿ ಇರಬೇಕು ಎಂದು ಹೇಳಿದರು.
ರೋಟರಿ ಸಂಸ್ಥೆಯ ಅಧ್ಯಕ್ಷ ಆರ್.ವಿ.ಸುರೇಶ್ ಮಾತನಾಡಿ, ರೋಟರಿ ಸಂಸ್ಥೆಯ ಮೂಲಕ ಸಮಾಜಕ್ಕೆ ಅನುಕೂಲವಾಗುವಂತಹ ಹಲವಾರು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಸನ್ಮಾನವನ್ನು ಸ್ವೀಕರಿಸಿದ ಡಾ. ಜಿ.ವಿ. ಸತ್ಯನಾರಾಯಣ ಮಾತನಾಡಿ, ಸನ್ಮಾನದಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡಲು ಪ್ರೋತ್ಸಾಹ ದೊರೆತಿದೆ ಎಂದರು.
ಕಾರ್ಯದರ್ಶಿ ಡಿ.ಪುಟ್ಟಸ್ವಾಮಯ್ಯ, ನಿಕಟಪೂರ್ವ ಅಧ್ಯಕ್ಷ ಕೆ.ಗೋಪಾಲ್, ಕಾರ್ಯದರ್ಶಿ ಅಲ್ತಾಫ್ ಅಹಮದ್, ಎಂ.ಚಂದ್ರಶೇಖರ್, ಪಟೇಲ್ ಸಿ.ರಾಜು, ಎ.ಎನ್.ನಾಗರಾಜ್, ಕೆ.ಸಿದ್ದೇಗೌಡ, ಎಚ್.ಚಂದ್ರಶೇಖರ್, ಆರ್.ಕುಮಾರಸ್ವಾಮಿ ಇತರರು ಉಪಸ್ಥಿತರಿದ್ದರು.