ಇಂಡಿ: ಅಂಗವೈಕಲ್ಯ ಪ್ರಮಾಣ ಪತ್ರ ನೀಡುವ ವೈದ್ಯರು ಬಾರದ್ದಕ್ಕೆ ಆಕ್ರೋಶಗೊಂಡು ತಾಲ್ಲೂಕಿನ ಅಂಗವಿಕಲರು ಬುಧವಾರ ಇಲ್ಲಿಯ ಸರ್ಕಾರಿ ಆಸ್ಪತ್ರೆಯ ಎದು ಧರಣಿ ನಡೆಸಿದರು.
ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 2ನೇ ಬುಧವಾರ ಮಾತ್ರ ಅಂಗವಿಕಲರನ್ನು ತಪಾಸಣೆ ಮಾಡಿ ಪ್ರಮಾಣ ಪತ್ರ ನೀಡುತ್ತಾರೆ. ಈ ಕೆಲಸಕ್ಕೆ ವಿಜಾಪುರ ಜಿಲ್ಲಾ ಆಸ್ಪತ್ರೆಯಿಂದ ತಜ್ಞ ವೈದ್ಯರು (ಪರಿಣಿತ) ಬರುತ್ತಾರೆ. ಆದರೆ ಬುಧವಾರ ಮಧ್ಯಾಹ್ನ 2 ಗಂಟೆಯಾದರೂ ವೈದ್ಯರು ಬಾರದ್ದರಿಂದ ಆಸ್ಪತ್ರೆಗೆ ಬಂದಿದ್ದ ನೂರಾರು ಜನ ಅಂಗವಿಕಲರು ಬೇಸತ್ತು ಕಂಗಾಲಾಗಿ ಧರಣಿಗೆ ಕುಳಿತರು.
ಈ ಸಂದರ್ಭದಲ್ಲಿ ಅಪ್ಪಾಶ್ಯಾ ಕಾಂಬಳೆ ಮಾತನಾಡಿ, ತಾಲ್ಲೂಕಿನ ವಿವಿಧ ಗ್ರಾಮಗಳಿಂದ ನಡೆಯಲು ಆಗದ ಕೆಲವು ಜನ ಅಂಗವಿಕಲರು ಟಂಟಂ, ಜೀಪ, ಮತ್ತು ಇನ್ನಿತರ ವಾಹನಗಳನ್ನು ಬಾಡಿಗೆ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ಪ್ರಮಾಣ ಪತ್ರ ಕೊಡುವವರೇ ಇಲ್ಲ. ಹೀಗಾದರೆ ವಿನಾಕಾರಣ ಬಾಡಿಗೆ ಕೊಡುವವರು ಯಾರು ಎಂದು ಪ್ರಶ್ನಿಸಿ,ಧರಣಿ ನಿರತರಿಗೆ ಬೆಂಬಲಿಸಿದರು.
ವೈದ್ಯಾಧಿಕಾರಿ ಡಾ. ರಾಕೇಶ ಕೋಳೇಕರ ಸ್ಥಳಕ್ಕೆ ಆಗಮಿಸಿ, ಪ್ರಮಾಣ ಪತ್ರ ನೀಡುವುದಾಗಿ ಹೇಳಿ, ಧರಣಿ ಹಿಂದಕ್ಕೆ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. ಆವಾಗ ಧರಣಿ ಹಿಂದಕ್ಕೆ ಪಡೆದರು.
ಧರಣಿಯಲ್ಲಿ ಶಿವಾನಂದ ಬಿರಾದಾರ, ಸಂಜು ಶಿಂಧೆ, ಪ್ರಕಾಶ ಗೋಡೇಕರ, ಖಾನುಬಿ ಚೌಧರಿ, ಭ್ರಹ್ಮಾನಂದ ಬಿರಾದಾರ, ಮಲ್ಲೇಶಿ ಢವಳೇಶ್ವರ, ಕಲಾವತಿ ಢವಳೇಶ್ವರ, ಸೋನುಬಾಯಿ ಪೂಜಾರಿ, ರಾಖೇಶ ಪಾರೆ, ಸಿದರಾಯ ಹಂಚಿನಾಳ ಭಾಗವಹಿಸ್ದ್ದಿದರು.
ಪಲ್ಸ್ ಪೋಲಿಯೊ 20ರಿಂದ
ವಿಜಾಪುರ: ರಾಷ್ಟ್ರೀಯ ಪಲ್ಸ್ ಪೋಲಿಯೊ ಮೊದಲ ಸುತ್ತಿನ ಲಸಿಕಾ ಕಾರ್ಯಕ್ರಮ ಇದೇ 20ರಿಂದ 23ರ ವರೆಗೆ ಜಿಲ್ಲೆಯಾದ್ಯಂತ ಜರುಗಲಿದ್ದು, ಎಲ್ಲ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ತಿಳಿಸಿದರು.
ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದ ಜಾಗೃತಿಗೆ ರೂಪಿಸಿರುವ ಸಿಡಿಗಳನ್ನು ಬಿಡುಗಡೆ ಮಾಡಲಾಯಿತು. ಡಾ.ಮುಕುಂದ ಗಲಗಲಿ, ಡಾ.ವೈ.ಆರ್. ಬೆಳ್ಳುಬ್ಬಿ, ಡಾ.ವಿಶ್ವನಾಥ ಗಲಗಲಿ, ಡಾ.ಎಲ್.ಎಚ್. ಬಿದರಿ, ಡಾ.ಎಸ್.ಎಸ್. ಯರನಾಳ ಇತರರು ಸಭೆಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.