ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈನ್ ಉತ್ತೇಜನಕ್ಕೆ ಕುಡಿಯಿರಿ-ಕುಡಿಸಿರಿ ಯೋಜನೆ!

Last Updated 11 ಸೆಪ್ಟೆಂಬರ್ 2011, 7:00 IST
ಅಕ್ಷರ ಗಾತ್ರ

ವಿಜಾಪುರ: ದ್ರಾಕ್ಷಿಯಿಂದ ತಯಾರಿಸುವ ವೈನ್ ಉತ್ತೇಜನಕ್ಕೆ ಏನು ಮಾಡಬೇಕು?

ಸರ್ಕಾರದ ಸೌಲಭ್ಯಕ್ಕಾಗಿ ಕಾಯುವ ಬದಲು ದ್ರಾಕ್ಷಿ ಬೆಳೆಗಾರರು ಮೊದಲು ತಾವು ವೈನ್ ಕುಡಿಯಬೇಕು. ಇತರರಿಗೂ ಕುಡಿಸಬೇಕು!

ಈ ಸಲಹೆ ದೊರೆತಿದ್ದು ವಿಜಾಪುರದಲ್ಲಿ ಶನಿವಾರದಿಂದ ಆರಂಭಗೊಂಡಿರುವ ದ್ರಾಕ್ಷಿ ಬೆಳೆಯ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ, `ವೈನ್ ಸೇವನೆ ಆರೋಗ್ಯಕ್ಕೆ ಉತ್ತಮ ಎಂದು ವೈದ್ಯರು ಹೇಳುತ್ತಾರೆ. ವೈದ್ಯರೇ ಸಲಹೆ ನೀಡುತ್ತಿರುವುದರಿಂದ ವೈನ್ ಸೇವಿಸುವುದರಲ್ಲಿ ತಪ್ಪೇನಿದೆ? ದ್ರಾಕ್ಷಿ ಬೆಳೆಗಾರರು ಮೊದಲು ನೀವು ವೈನ್ ಕುಡಿಯಿರಿ. ಇತರರಿಗೂ ಕುಡಿಸಿರಿ. ಕುಡಿಯಿರಿ-ಕುಡಿಸಿರಿ ಯೋಜನೆ ಜಾರಿಗೆ ತನ್ನಿ~ ಎಂದು ಹೇಳಿ ಚರ್ಚೆಗೆ ಪೀಠಿಕೆ ಹಾಕಿದರು.

`ನಿಮ್ಮ ಮಕ್ಕಳ ಮದುವೆಗಳನ್ನು ಅದ್ದೂರಿಯಾಗಿ ಮಾಡುತ್ತೀರಿ. ಕೊಡಗು ಮಾದರಿಯಲ್ಲಿ ನೀವೂ ಮದುವೆಗಳಲ್ಲಿ ವೈನ್ ಇಡಿ. ಕುಡಿಯೋರು ಕುಡಿಯುತ್ತಾರೆ. ನೀವು ಬೇರೆ ಬೇರೆಯದನ್ನು ಕುಡಿಯುವುದನ್ನು ಬಿಟ್ಟು ವೈನ್‌ನ್ನೇ ಕುಡಿಯಿರಿ~ ಎಂದು ಹೇಳಿದಾಗ ಹಾಸ್ಯದ ಹೊನಲು ಹರಿಯಿತು.

ಇದಕ್ಕೆ ದನಿಗೂಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, `ಯತ್ನಾಳ ಅವರ ಸಲಹೆಗೆ ನನ್ನ ಸಹಮತ ಇದೆ. ನಿಮ್ಮ ಮನೆಗೆ ಬರುವ ಅತಿಥಿಗಳಿಗೂ ವೈನ್ ಕೊಡಿ. ಆದರೆ, ಆ ಪ್ರಮಾಣ ಅತ್ಯಲ್ಪವಾಗಿರಲಿ~ ಎಂದರು.

`ವೈನ್ ವಿಷಯದಲ್ಲಿ ಯೂರೋಪ್ ದೇಶಗಳು ನಮಗೆ ಮಾದರಿಯಾಗಲಿ. ಜನರು ಮದ್ಯ ಬಿಟ್ಟು ವೈನ್ ಸೇವಿಸುವಂತಾಗಲಿ~ ಎಂದು ಡಾ.ಎಚ್.ಪಿ. ಸಿಂಗ್ ಹೇಳಿದರು.

ಜಮಖಂಡಿ ಶಾಸಕ ಶ್ರೀಕಾಂತ ಕುಲಕರ್ಣಿ, `ಕುಡಿಯಿರಿ-ಕುಡಿಸಿರಿ ಬದಲು ತಿನ್ನಿರಿ-ತಿನಿಸಿರಿ ಯೋಜನೆ ಜಾರಿಗೆ ತನ್ನಿ. ಔಷಧಿ ಬಳಕೆ ರಹಿತ ಸಾವಯವ ಪದ್ಧತಿಯಲ್ಲಿ ಉತ್ಕೃಷ್ಟ ಗುಣಮಟ್ಟದ ದ್ರಾಕ್ಷಿ ಬೆಳೆಸಿ ನೀವೂ ತಿನ್ನಿ. ಇತರರಿಗೂ ತಿನ್ನಲು ಕೊಡಿ~ ಎಂದರು.

`ದ್ರಾಕ್ಷಿ ಬೆಳೆಗಾರರ ಸಂಘದಲ್ಲಿ ದೊಡ್ಡ ರಾಜಕೀಯವಿದೆ. ನಾನು ಕೇಂದ್ರ ಸಚಿವನಾಗಿದ್ದಾಗ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಸಂಬಂಧಿಸಿದ ಸಚಿವರಿಗೆ ದ್ರಾಕ್ಷಿ ಬೆಳೆಗಾರರನ್ನು ಭೇಟಿ ಮಾಡಿಸಿ ಎಲ್ಲವನ್ನೂ ಮನವರಿಕೆ ಮಾಡಿಕೊಟ್ಟಿದ್ದೆ. ಆದರೆ, ಸಚಿವರು ಕರೆದ ಸಭೆಗೂ ದ್ರಾಕ್ಷಿ ಬೆಳೆಗಾರರ ಸಂಘದವರು ಹಾಜರಾಗಲಿಲ್ಲ~ ಎಂದು ಆಪಾದಿಸಿದರು.

ಔಷಧಿಯ ಘಾಟು: ಈ ವಿಚಾರ ಸಂಕಿರಣ ದ್ರಾಕ್ಷಿ ಹಣ್ಣಿನಂತೆಯೇ ಹುಳಿ ಮತ್ತು ಸಿಹಿಯ ಮಿಶ್ರಣದಂತಿತ್ತು.
`ದ್ರಾಕ್ಷಿಯ ನಾಟಿಯಿಂದ ಹಿಡಿದು ಅದನ್ನು ಒಣಗಿಸಿ ಒಣ ದ್ರಾಕ್ಷಿ ತಯಾರಿಕೆಯವರೆಗೆ ಬಳಸುವ ಎಲ್ಲ ಔಷಧಿ, ಉಪಕರಣಗಳ ಮಾರಾಟದ ವ್ಯವಸ್ಥೆ ಇಲ್ಲಿದೆ. ರಾಜ್ಯ ಮತ್ತು ಹೊರ ರಾಜ್ಯದವರು ಇಲ್ಲಿ ಮಳಿಗೆ ಆರಂಭಿಸಿದ್ದಾರೆ. ಇದರಿಂದ ನಮಗೆ ಮತ್ತಷ್ಟು ಮಾಹಿತಿ ಪಡೆಯಲು ನೆರವಾಗುತ್ತಿದೆ~ ಎಂದು ದ್ರಾಕ್ಷಿ ಬೆಳೆಗಾರ ಮಾರುತಿ ಹೇಳಿದರು.

`ವಿಜಾಪುರ ದ್ರಾಕ್ಷಿ ಬೆಳೆಯ ಕಣಜ. ಆದರೆ, ನಾವು ದ್ರಾಕ್ಷಿ ಬೆಳೆ ನಾಟಿ ಮಾಡಬೇಕಾದರೆ ಸಸಿಗಳ ದೊಡ್ಡ ಸಮಸ್ಯೆ ಇದೆ. ಪ್ರಮಾಣಿಕೃತ ಸಸಿಗಳೇ ನಮಗೆ ದೊರೆಯುವುದಿಲ್ಲ. ತೋಟಗಾರಿಕೆ ವಿಶ್ವವಿದ್ಯಾಲಯವಾಗಲಿ, ದ್ರಾಕ್ಷಿ ಬೆಳೆಗಾರರ ಸಂಘದವರಾಗಲಿ ತಾವೇ ಈ ದ್ರಾಕ್ಷಿ ಸಸಿಗಳನ್ನು ಬೆಳೆಸಿ ರೈತರಿಗೆ ಪೂರೈಸಬೇಕಿದೆ~ ಎಂಬುದು ಹೊಸದಾಗಿ ದ್ರಾಕ್ಷಿ ನಾಟಿ ಮಾಡಿರುವ ಯುವಕ ರಾಮದೇವ್ ಬೇಡಿಕೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT