ಹುಮನಾಬಾದ್: ಬೇಸಿಗೆ ಅವಧಿಯಲ್ಲಿ ಅಂತರ್ಜಲ ಪ್ರಮಾಣ ಕುಸಿದು, ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವುದನ್ನು ಕೇಳುವುದು ಮಾತ್ರ ಅಲ್ಲ ನೋಡಿಯೂ ಇದ್ದೇವೆ. ಆದರೇ ಮಳೆಗಾಲ ಆರಂಭಗೊಂಡು ಈಗಾಗಲೇ ತಿಂಗಳು ಗತಿಸಿದ ಈ ಸಂದರ್ಭದಲ್ಲೂ ಕುಡಿಯುವ ನೀರಿನ ಸಮಸ್ಯೆ ಇದೆ ಎಂದರೇ ಯಾರೂ ನಂಬುವುದಿಲ್ಲ. ಆದರೇ ತಾಲ್ಲೂಕಿನ ಶಕ್ಕರಗಂಜವಾಡಿ ಗ್ರಾಮದಲ್ಲಿ ಅಂಥದೊಂದು ಸಮಸ್ಯೆ ಇದೆ.
ಬೇಸಿಗೆಯಲ್ಲಿ ಹನಿನೀರಿಗಾಗಿ ಕಿ.ಮೀ ಗಟ್ಟಲೇ ಹಲವಡೆ ಅಡ್ಡಾಡಿದ್ದೇವು. ಆಗ ಅನಿವಾರ್ಯ ಎನ್ನುವ ಉದ್ದೇಶದಿಂದ ಮನಸ್ಸಿಗೆ ಸಮಾಧಾನ ಹೇಳಿಕೊಂಡಿದ್ದೇವು. ಆದರೇ ಈಗ ಸಾಕಷ್ಟು ನೀರು ಇದ್ದರೂ ಮೋಟರ ಅಳವಡಿಕೆ ಮತ್ತಿತರ ಸಣಪುಟ್ಟ ಕಾರಣ ಮತ್ತು ಚುನಾಯಿತ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದಾಗಿ ನಾವು ಪ್ರತಿದಿನವು ತೊಂದರೆ ಅನುಭವಿಸುತ್ತಿದ್ದೇವೆ ಎಂದು ಗ್ರಾಮದ ಮಹಿಳೆಯರು ನೋವು ತೋಡಿಕೊಂಡರು.
ಈ ಗ್ರಾಮದ ಮತಕ್ಷೇತ್ರಕ್ಕೊಳಪಡುವ ಶಾಸಕ ಇದುವರೆಗೂ ಈ ಊರೊಳಗೆ ಕಾಲಿಟ್ಟಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಚುನಾಯಿತ ಪ್ರತಿನಿಧಿಗಳು ಊರಿಗೆ ಬರುವುದು ಮುಖ್ಯವಲ್ಲ. ಈ ಕ್ಷೇತ್ರದ ಶಾಸಕ ಕರುಣೆ ತೋರಿ ಗ್ರಾಮಕ್ಕೆ ಕುಡಿಯುವ ನೀರು ಮತ್ತಿತರ ಮೂಲ ಸೌಕರ್ಯ ಕಲ್ಪಿಸುವ ಸಂಬಂಧ ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣ ಆದೇಶ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.