ನವದೆಹಲಿ (ಪಿಟಿಐ): ಶಸ್ತ್ರಾಸ್ತ್ರಗಳ ಅಕ್ರಮ ಮಾರಾಟದಲ್ಲಿ ರಾಜ್ಯದ ಅಧಿಕಾರಿಗಳ ಪಾತ್ರವಿರುವ ಆರೋಪಗಳ ಕುರಿತು ತನಿಖೆ ನಡೆಸುವಲ್ಲಿ ರಾಜಸ್ತಾನ ಸರ್ಕಾರ ನಿಧಾನಗತಿ ಪ್ರಗತಿ ತೋರಿರುವುದಕ್ಕೆ ಶುಕ್ರವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್, ಈ ಬಗ್ಗೆ ತನಿಖೆ ನಡೆಸಲು ರಾಜ್ಯ ಪೊಲೀಸರಿಗೆ ಕಷ್ಟವಾದಲ್ಲಿ, ತಾನೇ ಸಿಬಿಐ ತನಿಖೆಗೆ ಆದೇಶ ನೀಡುವುದಾಗಿ ತಿಳಿಸಿದೆ.
ನ್ಯಾಯಮೂರ್ತಿಗಳಾದ ಬಿ. ಸುದರ್ಶನ್ ರೆಡ್ಡಿ ಮತ್ತು ಎಸ್.ಎಸ್. ನಿಜ್ಜಾರ್ ಅವರನ್ನೊಳಗೊಂಡ ನ್ಯಾಯಪೀಠವು, ಮೂರು ವಾರಗಳಲ್ಲಿ ಉತ್ತರಿಸಲು ರಾಜಸ್ತಾನ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಆದೇಶಿಸಿದೆ.
‘ಶಸ್ತ್ರಾಸ್ತ್ರಗಳ ಅಕ್ರಮ ಮಾರಾಟಕ್ಕೆ ಸಂಬಂಧಿಸಿದಂತೆ ಹಲವು ಐಎಎಸ್ ಮತ್ತು ಸೇನಾ ಅಧಿಕಾರಿಗಳ ವಿರುದ್ಧ ದಾಖಲಾದ 14 ಎಫ್ಐಆರ್ ಪ್ರಕರಣಗಳ ಬಗ್ಗೆ ರಾಜ್ಯ ಪೊಲೀಸರು ಕೈಗೊಂಡ ತನಿಖೆ ಯಾವ ಹಂತದಲ್ಲಿದೆ’ ಎಂಬುದನ್ನು ತನಗೆ ಮಹತ್ವದ ಪ್ರಮಾಣಪತ್ರ ಸಲ್ಲಿಕೆ ಮೂಲಕ ಸ್ಪಷ್ಟಪಡಿಸುವಂತೆ ನ್ಯಾಯಪೀಠ ಸೂಚಿಸಿದೆ.
ಈ ಹಿಂದಿನ ವಿಚಾರಣೆಯಲ್ಲಿ ಆರೋಪಕ್ಕೆ ಗುರಿಯಾಗಿರುವ ಸೇನಾಧಿಕಾರಿಗಳ ವಿರುದ್ಧ ರಕ್ಷಣಾ ಸಚಿವಾಲಯ ಕೈಗೊಂಡಿರುವ ಕ್ರಮಗಳ ಕುರಿತು ಆರು ವಾರಗಳಲ್ಲಿ ಉತ್ತರಿಸುವಂತೆ ಮತ್ತು ಅಗತ್ಯ ಪ್ರಮಾಣಪತ್ರ ಸಲ್ಲಿಸುವಂತೆ ನ್ಯಾಯಪೀಠ ನಿರ್ದೇಶನ ನೀಡಿತ್ತು.