ವಿಜಾಪುರ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶುಕ್ರವಾರ ಪ್ರಸಕ್ತ ಸಾಲಿನ ಶಾಲಾ ಆರಂಭೋತ್ಸವಕ್ಕೆ ಅದ್ದೂರಿಯ ಚಾಲನೆ ನೀಡಲಾಯಿತು.
ಹೊಚ್ಚ ಹೊಸ ಕನಸುಗಳೊಂದಿಗೆ ಶಾಲೆಗೆ ಆಗಮಿಸುವ ಮಕ್ಕಳ ಸಂತಸ ಇಮ್ಮಡಿಗೊಳಿಸಲು ಆಯಾ ಶಾಲಾ ಶಿಕ್ಷಕರು ಶಾಲಾ ಕೋಣೆ ಆವರಣಗಳನ್ನು ಸ್ವಚ್ಚಗೊಳಿಸಿ, ಸುಣ್ಣ ಬಣ್ಣ ಲೇಪಿಸಿ, ತಳಿರು ತೋರಣಗಳಿಂದ ಶೃಂಗರಿಸಿ ಮಕ್ಕಳನ್ನು ಸ್ವಾಗತಿಸುವ ದೃಶ್ಯಗಳು ಎಲ್ಲೆಡೆ ಕಂಡುಬಂದವು.
ಬೇಸಿಗೆ ರಜೆಯ ನಿಮಿತ್ತ ಹಲವು ದಿನಗಳವರೆಗೆ ಮಕ್ಕಳಿಲ್ಲದೆ ಬಣಗುಡುತ್ತಿದ್ದ ಶಾಲಾ ಆವರಣದಲ್ಲಿ ಶುಕ್ರವಾರ ಮಕ್ಕಳ ಕಲರವ ಕಂಡು ಬಂತು. ನಗರದ ಇಬ್ರಾಹಿಂಪುರ ನಡೆದ ಶಾಲಾ ಪ್ರಾರಂಭೋತ್ಸವದಲ್ಲಿ ಭಾಗವಹಿಸಿದ ಸಿ.ಆರ್.ಪಿ. ಬಿ.ಎಸ್. ಬೆಳ್ಳುಂಡಗಿ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸಲು ಕೋರಿದರು.
ಇದೇ ಸಂದರ್ಭದಲ್ಲಿ ನಗರಸಭೆ ಸದಸ್ಯ ಗೋಪಾಲ ಘಟಕಾಂಬಳೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಉಚಿತ ಪುಸ್ತಕ ಹಾಗೂ ಸಮವಸ್ತ್ರ ವಿತರಿಸಿದರು. ಮುಖ್ಯಶಿಕ್ಷಕ ಆರ್. ಎ. ಕುಲಕರ್ಣಿ, ಸೂರ್ಯಕಾಂತ ಗಡಗಿ ಎಸ್.ಡಿ.ಎಂ.ಸಿ. ಸದಸ್ಯ ಲಕ್ಷ್ಮೀ ಪವಾರ, ಉಪಾಧ್ಯಕ್ಷ ಲಕ್ಷ್ಮಣ ಕೋರಿ, ಈಶ್ವರ ಹೂಗಾರ, ಮತ್ತಿತರರು ಹಾಜರಿದ್ದರು.