ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಸ್ಥಾನದಿಂದ ವಜಾಕ್ಕೆ ಒತ್ತಾಯ

Last Updated 9 ಫೆಬ್ರುವರಿ 2012, 6:40 IST
ಅಕ್ಷರ ಗಾತ್ರ

ರಾಯಚೂರು: ವಿಧಾನಸಭೆಯಲ್ಲಿ ಮೊಬೈಲ್‌ನಲ್ಲಿ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿ ವಿಧಾನ ಸಭೆ ಪಾವಿತ್ರ್ಯತೆ ಕಲುಷಿತಗೊಳಿಸಿದ ಶಾಸಕರಾದ ಲಕ್ಷ್ಮಣ ಸವದಿ, ಸಿ.ಸಿ ಪಾಟೀಲ್ ಹಾಗೂ ಕೃಷ್ಣಾ ಪಾಲೇಮಾರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿ ರಾಯಚೂರಿನಲ್ಲಿ ಬುಧವಾರ  ವಿವಿಧ ಸಂಘ ಸಂಸ್ಥೆ  ಹಾಗೂ ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದವು.

ಈ ಮೂವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರಷ್ಟೇ ಸಾಲದು. ಶಾಸಕ ಸ್ಥಾನದಿಂದಲೇ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದ ಸಂಘಟನೆಗಳು, ಈ ಮೂವರು ಪ್ರತಿಕೃತಿಗಳನ್ನು ವಿವಿಧ ವೃತ್ತಗಳಲ್ಲಿ ದಹನ ಮಾಡಿ ಆಕ್ರೋಷ ವ್ಯಕ್ತಪಡಿಸಿದವು.

ಜೆಡಿಎಸ್ ಪಕ್ಷ:  ವಿಧಾನಸಭೆಯಲ್ಲಿ ಅಶ್ಲೀಲ ದೃಶ್ಯಗಳನ್ನು ನೋಡಿ ಪಾವಿತ್ರ್ಯತೆಯನ್ನು ಹಾಳು ಮಾಡಿದ ಶಾಸಕರನ್ನು ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಜೆಡಿಎಸ್ ಜಿಲ್ಲಾ ಘಟಕದ ಪದಾಧಿಕಾರಿಗಳು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಚಿವರು ರಾಜೀನಾಮೆ ನೀಡಿದರೆ ಸಾಲದು ಅವರನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಬೇಕು, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು, ಒಂದು ವೇಳೆ ಸಭಾಪತಿ ಹಾಗೂ ಮುಖ್ಯಮಂತ್ರಿಗಳು ಸಚಿವರ ಪರ ಸಮರ್ಥನೆ ಮಾಡಿಕೊಂಡರೆ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು, ಜಿಲ್ಲಾ ವಕ್ತಾರ  ಎಂ.ವಿರುಪಾಕ್ಷಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಶಿವಶಂಕರ ವಕೀಲ ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

ಗ್ರಾಮೀಣ ಘಟಕದ ಅಧ್ಯಕ್ಷ ನಿಜಾಮುದ್ದೀನ್, ನಗರಸಭೆ ಸದಸ್ಯರಾದ ತಿಮ್ಮಪ್ಪ ಪಿರಂಗಿ, ಪಿ. ಯಲ್ಲಪ್ಪ,ರಾಜ್ಯ ಕಾರ್ಯದರ್ಶಿ ಬಾಬು ದಿನ್ನಿ, ಹಿಂದಳಿದ ವರ್ಗಗಳ ಘಟಕದ ಅಧ್ಯಕ್ಷ ಪಂಪಾಪತಿ, ನರಸಪ್ಪ, ಖಲೀಂಪಾಷಾ, ರಾಮಕೃಷ್ಣ, ನರಸಿಂಹಲು ಕಟ್ಟಿಮನಿ, ಎಚ್.ಡಿ ಭರಮಣ್ಣ, ಆರ್.ರಾಮಸ್ವಾಮಿ, ಜಂಬುಲಿಂಗ ಯಾದವ್, ಆಂಜನೇಯ ವಕೀಲ, ಈರಣ್ಣ, ನಾಗರಾಜ,  ವೆಂಕಟೇಶ ಯಾದವ್ ಹಾಗೂ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಅಕರವೇ ಸಂಘಟನೆ: ವಿಧಾನಸಭೆಯಲ್ಲಿ ಸಚಿವರಾದವರೇ ಮೊಬೈಲ್‌ನಲ್ಲಿ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಘಟನೆ ರಾಜ್ಯದ ಜನತೆಗೆ ಅವಮಾನಕರವಾದುದು. ಈ ಸರ್ಕಾರ ಹಗರಣಗಳ ಸರಮಾಲೆಯನ್ನು ಸುತ್ತಿಕೊಂಡಿದ್ದು, ಕೂಡಲೇ ಈ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಅಖಂಡ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ವೆಂಕಟ ಯಾದವ್, ಮಲ್ಲಿಕಾರ್ಜುನ, ಶಿವಕುಮಾರ, ಅಕ್ಬರ್, ರಾಜೇಶ, ಮೂಕೇಶ, ರಮೇಶ, ರಂಗರೆಡ್ಡಿ, ಆಂಜಿ, ರಮೇಶ, ಮೈಲಾರ,ಆರ್.ಬಾಬು, ಶರಣಬಸವ ಹಾಗೂ ಮತ್ತಿತರರಿದ್ದರು.

ಸಿಪಿಐಎಂ  ಪಕ್ಷ: ಪ್ರಜಾಪ್ರಭುತ್ವದ ಅತ್ಯುನ್ನತವಾದ ವಿಧಾನಸಭಾ ಅಧಿವೇಶನದಲ್ಲಿ ಸಚಿವರು ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಘಟನೆ ಖಂಡಿಸಿ ಸಿಪಿಐಎಂ ತಾಲ್ಲೂಕು ಸಮಿತಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಬುಧವಾರ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಸಚಿವರ ಪ್ರತಿಕೃತಿ ದಹನ ಮಾಡಿ ಪ್ರತಿಭಟನೆ ನಡೆಸಿದರು. ವಿಧಾನಸಭಾ ಸದಸ್ಯತ್ವವನ್ನು ರದ್ದುಪಡಿಸಬೇಕು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಿಪಿಐಎಂ ಪಕ್ಷದ ತಾಲ್ಲೂಕು ಕಾರ್ಯದರ್ಶಿ ಕೆ.ಜಿ ವೀರೇಶ,  ಕರಿಯಪ್ಪ ಅಚ್ಚೊಳ್ಳಿ, ಎಚ್.ಪದ್ಮಾ, ಜೆ.ಸುರೇಶ, ಜೆ.ಎಂ ಚನ್ನಬಸಯ್ಯ, ಶ್ರಿಧರ, ಎಂ.ರವಿ, ವರಲಕ್ಷ್ಮಿ, ಪಾರ್ವತಿ, ಜಿಲಾನಿಪಾಷಾ, ಎಂ.ಸಿ ಶಿವಕುಮಾರ, ಜಿ.ಎಸ್ ವೀರಭದ್ರಪ್ಪ,ಮಲ್ಲಿಕಾ, ಗೋಕರಮ್ಮ, ಚಂದ್ರಕಲಾ, ಶಾರದಮ್ಮ, ಅರುಣಕುಮಾರ, ವೈ.ಈರಣ್ಣ ಹಾಗೂ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕನ್ನಡ ಸೇನೆ ಸಂಘಟನೆ: ಅಶ್ಲೀಲ ದೃಶ್ಯಗಳನ್ನು ವಿಧಾನಸಭಾದಲ್ಲಿ ವೀಕ್ಷಿಸಿದ ಮೂವರು ಶಾಸಕರನ್ನು ಸದಸ್ಯತ್ವದಿಂದ ವಜಾಗೊಳಿಸಬೇಕು ಎಂದು ಕನ್ನಡ ಸೇನೆ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಒತ್ತಾಯಿಸಿದರು.

ಶಾಸಕರ ಸ್ಥಾನದಿಂದ ವಜಾಗೊಳಿಸಬೇಕು ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಪ್ರಕಾಶ ವಕೀಲ ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಶಾಂತಕುಮಾರ, ತಾಲ್ಲೂಕು ಅಧ್ಯಕ್ಷ ತಮ್ಮಣ್ಣ ರಾಠೋಡ್,ಕಾರ್ಯಾಧ್ಯಕ್ಷ ಸಿದ್ಧಪ್ಪ, ಪೈಲ್ವಾನ್ ಇಸ್ಮಾಯಿಲ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಭೀಮೇಶ, ನರಸಿಂಹಲು ಬಾಪೂರ, ಬಸವರಾಜ ನಾಡಂಗಿ, ರಾಜು ಬಿ.ಗಣೇಕಲ್, ಖಾಜಾ ಖುರೇಶಿ, ಪಂಪಾಪತಿ ಬಿ.ಗಣೇಕಲ್ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

ಕರವೇ(ಪ್ರವೀಣಶೆಟ್ಟಿ ಬಣ) ಸಂಘಟನೆ: ವಿಧಾನ ಮಂಡಲದ ಅಧಿವೇಶನ ಸಂದರ್ಭದಲ್ಲಿ ಅಶ್ಲೀಲ ಚಿತ್ರಗಳ ವೀಕ್ಷಣೆಯಲ್ಲಿ ತೊಡಗಿದ್ದ ಸಚಿವರಾದ ಲಕ್ಷ್ಮಣ ಸವದಿ, ಸಿ.ಸಿ ಪಾಟೀಲ್ ಸದಸ್ಯತ್ವದಿಂದ ವಜಾಗೊಳಿಸಿ ಅವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಬುಧವಾರ ನಗರದ ಸೂಪರ್ ಮಾರ್ಕೆಟ್ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣಶೆಟ್ಟಿ ಬಣ) ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಚಿವರ ಪ್ರತಿಕೃತಿ ದಹಿಸಿ ಪ್ರತಿಭಟನೆ ಮಾಡಿದರು.

ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮೇಶ ಮಂಗಾನವರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ. ತಾಲ್ಲೂಕು ಅಧ್ಯಕ್ಷ ಬಿ.ನಾಗೇಶ, ವೀರೇಶ ಹೀರಾ,ಮಾನಸಿಂಗ ಠಾಕೂರ್, ಶಿವಯ್ಯಶೆಟ್ಟಿ, ಖಲೀಲ್ ಪಾಷಾ, ಅಜೀಜ್, ಹಸನ್, ಸತ್ಯರಾಜ ಯುನೂಸ್, ಪರಮೇಶ, ಜಾಫರ್, ಆಜಾದ್ ಹಾಗೂ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ಎಐಡಿಎಸ್‌ಒ ಸಂಘಟನೆ: ವಿಧಾನಸಭೆ ಅಧಿವೇಶನದಲ್ಲಿ ಸಚಿವರು ಅಶ್ಲೀಲ ಚಿತ್ರಗಳನ್ನು ಮೊಬೈಲ್‌ನಲ್ಲಿ ವಿಕ್ಷೀಸುತ್ತಿರುವ ಖಂಡನೀಯ ಹಾಗೂ ನೀತಿಗೆಟ್ಟ ಸಚಿವರಿಗೆ ಉಗ್ರ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ಬುಧವಾರ ಎಐಡಿಎಸ್‌ಒ, ಎಐಡಿವೈಒ ಹಾಗೂ ಎಐಎಂಎಸ್‌ಎಸ್ ಸಂಘಟನೆಗಳ ಜಿಲ್ಲಾ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯನ್ನು ತಹಸೀಲ್ದಾರ ಕಚೇರಿ ಎದುರು ನಡೆಸಿದರು.

ಪ್ರತಿಭಟನೆಯಲ್ಲಿ  ಎಐಎಂಎಸ್‌ಎಸ್‌ನ ರಾಜ್ಯ ಕಾರ್ಯದರ್ಶಿ ಅಪರ್ಣಾ ಬಿ.ಆರ್, ಎಐಡಿಎಸ್‌ಒ ಅಧ್ಯಕ್ಷ ಮಹೇಶ ಚೀಕಲಪರ್ವಿ, ಎಐಎಂಎಸ್‌ಎಸ್‌ನ ಅಧ್ಯಕ್ಷೆ ಚೇತನಾ ಬನಾರೆ, ಎಐಡಿವೈಒನ ಚನ್ನಬಸವ ಜಾನೇಕಲ್ ಆಂಜನೇಯ, ಕಲ್ಲೂರು ಹಾಗೂ ಮತ್ತಿತರರು ಪಾಲ್ಗೊಂಡಿದ್ದರು. 

ಜೆಎಂಎಸ್ ಸಂಘ: ವಿಧಾನಸಭೆಯ ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿ ಸಚಿವರಾದ ಲಕ್ಷ್ಮಣ ಸವದಿ, ಸಿ.ಸಿ ಪಾಟೀಲ್ ಹಾಗೂ ಕೃಷ್ಣಪಾಲೆಮಾರ್ ಅಶ್ಲೀಲ ಚಿತ್ರ ನೋಡುತ್ತಿರುವುದು ಖಂಡನೀಯ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘ ಜಿಲ್ಲಾ ಘಟಕವು ತಿಳಿಸಿದೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನೇಕ ಹಗರಣಗಳಿಗೆ ಸಿಲುಕಿಕೊಂಡಿದೆ. ಇಂಥ ಬಿಜೆಪಿ ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಎಚ್.ಪದ್ಮಾ ಅವರು ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT