ಯಲ್ಲಾಪುರ: ಪಟ್ಟಣದ ಪದವಿ ಪೂರ್ವ ಕಾಲೇಜಿಗೆ ಅರಣ್ಯ ಇಲಾಖೆಯಿಂದ ಮಂಜೂರಾದ ಎರಡೂವರೆ ಎಕರೆ ಸ್ಥಳವನ್ನು ಶಾಸಕ ವಿ.ಎಸ್.ಪಾಟೀಲ ಮಂಗಳವಾರ ಸಾಯಂಕಾಲ ಪರಿಶೀಲನೆ ನಡೆಸಿದರು.
ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕ ಪಾಟೀಲ, ಸ್ಥಳವನ್ನು ಸುಪರ್ಧಿಗೆ ಪಡೆಯಲು 11.5 ಲಕ್ಷ ರೂ. ಭರಿಸ ಮಾಡಬೇಕಾಗಿದ್ದು ಶಿಕ್ಷಣ ಇಲಾಖೆಯಿಂದ ಭರಿಸಲಾಗುವುದು ಎಂದರು.
ಈಗಾಗಲೇ ಪ.ಪೂ. ಕಾಲೇಜಿಗೆ ಕಾಳಮ್ಮನಗರದಲ್ಲಿ 22 ಗುಂಟೆ ಸ್ಥಳ ಮಂಜೂರಿಯಾಗಿ ಕಟ್ಟಡ ಕಾಮಗಾರಿ ಪ್ರಾರಂಭವಾಗಿದೆಯಲ್ಲ ಅದನ್ನೇನು ಮಾಡುವಿರಿ? ಎಂಬ ಪ್ರಶ್ನೆಗೆ ಉತ್ತರಿಸಿ ಈಗಾಗಲೇ ಮಂಜೂರಾದ ಹಣ ವಾಪಸ್ ಹೋಗಬಾರದೆಂಬ ಕಾರಣದಿಂದ ಕಾಮಗಾರಿ ಪ್ರಾರಂಭಿಸಲಾಗಿತ್ತು. ಬೇಡಿಕೆಯಿಟ್ಟ ಈ ಸ್ಥಳ ಇಷ್ಟು ಬೇಗ ಮಂಜೂರಿರಾಗಬಹುದು ಎಂಬ ನಿರೀಕ್ಷೆಯಿರಲಿಲ್ಲ ಎಂದ ಶಾಸಕರು ಪದವಿ ಕಾಲೇಜಿಗೆ ಈ ಕಟ್ಟಡವನ್ನು ಬಿಟ್ಟುಕೊಟ್ಟು ಪದವಿ ಕಾಲೇಜಿಗೆ ಮಂಜೂರಾದ ಹಣದಲ್ಲಿ ಈ ಸ್ಥಳದಲ್ಲಿ ಕಟ್ಟಡ ಕಟ್ಟುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ರಾಘವೇಂದ್ರ ಭಟ್ಟ, ತಾ.ಪಂ. ಉಪಾಧ್ಯಕ್ಷ ನಟರಾಜ ಗೌಡರ್, ಪ.ಪಂ. ಸದಸ್ಯ ರಾಮು ನಾಯ್ಕ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಆರ್.ಜಿ.ಭಟ್ಟ, ನಾರಾಯಣ ನಾಯಕ, ಪ.ಪೂ. ಕಾಲೇಜಿನ ಪ್ರಾಚಾರ್ಯ ಕೆ.ಟಿ.ಭಟ್ಟ, ಉಪನ್ಯಾಸಕರಾದ ಸುಭಾಸ ನಾಯಕ, ಜಿ.ಎಚ್.ನಾಯಕ ಮುಂತಾದವರು ಉಪಸ್ಥಿತರಿದ್ದರು.