ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಇಬ್ಬರು ಹಾಲಿ ಮತ್ತು ಒಬ್ಬರು ಮಾಜಿ ಶಾಸಕರು ಸೋಲಿನ ಕಹಿ ಅನುಭವಿಸಿದ್ದಾರೆ. ಒಬ್ಬ ಶಾಸಕರು ಮಾತ್ರ ಗೆಲುವಿನ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಡ್ಯ ಜಿಲ್ಲಾ ಕ್ಷೇತ್ರದಲ್ಲಿ ವಿಧಾನಪರಿಷತ್ ಹಾಲಿ ಸದಸ್ಯ ಬಿ. ರಾಮಕೃಷ್ಣ ಹಾಗೂ ಮಾಜಿ ಶಾಸಕ ಎಂ. ಶ್ರೀನಿವಾಸ್ ಹಾಗೂ ಕೊಡಗು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅರಕಲಗೂಡು ಶಾಸಕ ಎ. ಮಂಜು ಅವರು ಸೋಲು ಅನುಭವಿಸಿದ್ದಾರೆ.
ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಗೆಲುವು ಸಾಧಿಸಿದ್ದಾರೆ.
ಮರು ಎಣಿಕೆ: ಮತ ಎಣಿಕೆಯಲ್ಲಿ ಉಂಟಾದ ಗೊಂದಲಗಳಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ ಮತಗಳ ಮರು ಎಣಿಕೆಯನ್ನು ಮಂಗಳವಾರ ಕೈಗೆತ್ತಿಕೊಳ್ಳಲಾಗಿದೆ.
ಬನಶಂಕರಿಯ ಕೆಂಪೇಗೌಡ ವೈದ್ಯಕೀಯ ಕಾಲೇಜಿನಲ್ಲಿ ಸೋಮವಾರ ಬೆಳಿಗ್ಗೆ ಆರಂಭವಾಗಿದ್ದ ಮತ ಎಣಿಕೆ ಮಧ್ಯರಾತ್ರಿವರೆಗೂ ನಡೆಸಿ ಸ್ಥಗಿತಗೊಳಿಸಲಾಗಿತ್ತು.
ಮಂಗಳವಾರ ಬೆಳಿಗ್ಗೆ ಮತ ಎಣಿಕೆ ಆರಂಭಿಸಿದಾಗ ಹಲವು ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದರು. ಮತ ಎಣಿಕೆ ಏಜೆಂಟರ ಸೋಗಿನಲ್ಲಿ ಹಲವರು ಅತಿಕ್ರಮ ಪ್ರವೇಶ ಮಾಡಿದ್ದು, ಮರು ಎಣಿಕೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ಸಭೆ ನಡೆಸಿದ ಚುನಾವಣಾಧಿಕಾರಿಗಳು ಮರು ಎಣಿಕೆ ನಿರ್ಧಾರ ಪ್ರಕಟಿಸಿದರು.
‘ನಾಲ್ಕು ಗಂಟೆಗೆ ಮತ ಎಣಿಕೆ ಆರಂಭವಾಗಿದ್ದು, ಮಧ್ಯರಾತ್ರಿವರೆಗೂ ಎಣಿಕೆ ನಡೆಯಿತು. ಬುಧವಾರ ಸಂಜೆ ವೇಳೆಗೆ ಮತಗಳ ಎಣಿಕೆ ಪೂರ್ಣಗೊಳ್ಳುವ ಸಾಧ್ಯತೆಗಳಿವೆ ಎಂದು ಚುನಾವಣಾಧಿಕಾರಿ ಬಿ.ಸಿ.ಸತೀಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.