ಬಳ್ಳಾರಿ ತಾಲೂಕಿನ ಕೊರ್ಲಗುಂದಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ 7ನೇ ತರಗತಿಯ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕೃತ್ಯ ಉದಾತ್ತವಾದ ಶಿಕ್ಷಕ ವೃತ್ತಿಗೆ ಮಾಡಿದ ಅವಮಾನ.
ಒಬ್ಬ ಮಾಡಿದ ತಪ್ಪಿಗೆ ಇಡೀ ಶಿಕ್ಷಕ ವೃಂದ ಸಮಾಜದ ಎದುರು ತಲೆ ತಗ್ಗಿಸಿ ನಿಲ್ಲುವಂತೆ ಆಗಿದೆ. ಈ ಕೃತ್ಯ ಖಂಡನೀಯ.
ಇತ್ತೀಚಿನ ವರ್ಷಗಳಲ್ಲಿ ಕೆಲ ಶಿಕ್ಷಕರು ಹೀಗೆ ವರ್ತಿಸುವ ದೂರುಗಳು ಬರುತ್ತಿವೆ. ಇಂತಹ ಒಂದೆರಡು ಪ್ರಕರಣಗಳಿಂದಾಗಿ ಜನರು ಎಲ್ಲ ಶಿಕ್ಷಕರನ್ನೂ ಅನುಮಾನದಿಂದ ನೋಡುವಂತಾಗಿದೆ.
ಲಂಪಟ ಶಿಕ್ಷಕರನ್ನು ಸಾರ್ವಜನಿಕರು ಹಿಡಿದು ಥಳಿಸುವಂತಹ ದೃಶ್ಯಗಳು ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿವೆ. ಒಟ್ಟಾರೆ ಶಿಕ್ಷಕರಿಗೆ ಇದ್ದ ಗೌರವ ಕಳೆದುಕೊಳ್ಳುವಂತಹ ಇಂತಹ ಬೆಳವಣಿಗಳು ನಡೆಯುತ್ತಿವೆ. ಇದು ನಿಜಕ್ಕೂ ದುರದೃಷ್ಟಕರ.
ವಿರೋಧ ಪಕ್ಷದ ನಾಯಕಿ ಮೋಟಮ್ಮ ಅವರು ಮೈಸೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿಯೊಬ್ಬರ ಜತೆಯಲ್ಲಿ ಶಿಕ್ಷಕನೊಬ್ಬ ಅನುಚಿತವಾಗಿ ವರ್ತಿಸಿದ ಪ್ರಕರಣವನ್ನು ಪರೋಕ್ಷವಾಗಿ ಸಮರ್ಥಿಸಿಕೊಳ್ಳುವಂತಹ ಮಾತುಗಳನ್ನು ಅಡಿದ್ದಾರೆ.
ನೊಂದವರ ಪರವಾಗಿ ನಿಲ್ಲಬೇಕಾದ ಸೌಜನ್ಯವನ್ನೂ ಅವರು ಮರೆತದ್ದು ಖಂಡನೀಯ. ಇಂತಹ ಪ್ರಕರಣಗಳನ್ನು ಸಮರ್ಥನೆ ಮಾಡಿಕೊಳ್ಳುವುದನ್ನು ಯಾರೂ ಒಪ್ಪುವುದಿಲ್ಲ.