ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕ ಹುದ್ದೆಗೆ ಸಿದ್ಧತೆ

Last Updated 3 ಜೂನ್ 2012, 19:30 IST
ಅಕ್ಷರ ಗಾತ್ರ

ಕರ್ನಾಟಕ ಸರ್ಕಾರ ಪ್ರೌಢಶಾಲೆಗಳ 3407 ಶಿಕ್ಷಕ ಹುದ್ದೆಗೆ ಅರ್ಜಿ ಕರೆದಿದೆ. ಈ ತಿಂಗಳ ಮೂರನೇ ವಾರ ಸ್ಪರ್ಧಾತ್ಮಕ ಅರ್ಹತಾ ಪರೀಕ್ಷೆ ನಡೆಯಲಿದೆ. ಸುಮಾರು 3.25 ಲಕ್ಷ ಜನ ಅರ್ಜಿ ಸಲ್ಲಿಸಿದ್ದಾರೆ.

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಮತ್ತು ಯಶಸ್ಸು ಪಡೆಯಲು ಕನಿಷ್ಠ 2 ವರ್ಷಗಳ ನಿರಂತರ ಅಭ್ಯಾಸ ಅತ್ಯಗತ್ಯ. ಏಕೆಂದರೆ ಅದರ ಪ್ರಶ್ನೆ ಪತ್ರಿಕೆ ಈ ಮಟ್ಟದ ಅಧ್ಯಯನವನ್ನು ಬೇಡುತ್ತದೆ.

ಎಷ್ಟೇ ಪ್ರತಿಭೆ ಇದ್ದರೂ ಇಂಥ ಪರೀಕ್ಷೆಯಲ್ಲಿ ಒಂದೆರಡು ತಿಂಗಳ ಅಧ್ಯಯನದಿಂದ ಯಶಸ್ಸು ಪಡೆಯುವುದು ಕಷ್ಟ. ಆದರೆ ಈಗ ಪರೀಕ್ಷೆಗೆ ಉಳಿದ ಸಮಯ ಬಹಳ ಕಡಿಮೆ. ಅಷ್ಟರಲ್ಲಿ ಏನು ಮಾಡಬಹುದು ಎಂಬುದನ್ನು ತಿಳಿಸಿಕೊಡುವುದೇ ಲೇಖನದ ಉ್ದ್ದದ್ದೇಶ.

ಶಿಕ್ಷಕ ಹುದ್ದೆ ಪರೀಕ್ಷಾರ್ಥಿಗಳು, ಇತರ ಪರೀಕ್ಷೆಗಳ ಅಭ್ಯರ್ಥಿಗಳಿಗಿಂತ ಭಿನ್ನ ಸ್ವರೂಪದ ಸವಾಲು ಎದುರಿಸಬೇಕಾಗುತ್ತದೆ. ಇಲ್ಲಿ ಮೊದಲನೆಯದು 100 ಅಂಕಗಳ ಸಾಮಾನ್ಯ ಪತ್ರಿಕೆ. ಯುಪಿಎಸ್‌ಸಿ ಅಥವಾ ಕೆಪಿಎಸ್‌ಸಿ ಮಾದರಿಯಲ್ಲಿ ರಚನೆಯಾಗುತ್ತದೆ.

ಇದು 3 ಭಾಗಗಳನ್ನು ಒಳಗೊಂಡಿದ್ದು, ಮೊದಲನೇ ಭಾಗ ಸೈಕಾಲಜಿ (ಮನಃಶಾಸ್ತ್ರ) 33 ಅಂಕಗಳು, ಎರಡನೇ ಭಾಗ ಮೆಂಟಲೆಬಿಲಿಟಿ 33, ಮೂರನೇ ಭಾಗ ಸಾಮಾನ್ಯ ಅಧ್ಯಯನದ (ಜ್ಞಾನ) 34 ಅಂಕಗಳುಳ್ಳ ಪತ್ರಿಕೆ. ಎರಡನೆಯದು: ಇದು ಕೂಡ 100 ಅಂಕದ ಮೆಥಡ್ ಪತ್ರಿಕೆ. ಅಭ್ಯರ್ಥಿಯ ಐಚ್ಛಿಕ ಅಧ್ಯಯನ ಆಧಾರಿತ ವಿಷಯದ ಮೇಲೆ ಸಿದ್ಧವಾಗಿರುತ್ತದೆ. ಮೇಲಿನ ಎರಡು ಪ್ರಶ್ನೆ ಪತ್ರಿಕೆಯಲ್ಲಿ 200 ಪ್ರಶ್ನೆಗಳಿದ್ದು, ಪ್ರತಿ ಪ್ರಶ್ನೆಗೂ 1 ಅಂಕ.

ಮೊದಲನೇ ಪತ್ರಿಕೆ!
`ನನ್ನ ಮೆಥಡ್‌ನ ವಿಷಯದ ಮೇಲೆ ನನ್ನ ಪರೀಕ್ಷಾ ಭವಿಷ್ಯ ನಿರ್ಧಾರ~ ಎಂಬುದು ಅಭ್ಯರ್ಥಿಗಳ ಸಾಮಾನ್ಯ ಗ್ರಹಿಕೆ. ಅದಕ್ಕಾಗೇ ಬಹುತೇಕರು ಮೆಥಡ್ ಅಧ್ಯಯನಕ್ಕೆ ಹೆಚ್ಚು ಅವಧಿ ಮೀಸಲಿಡುತ್ತಾರೆ. ಆದರೆ ಅನೇಕ ಸಂದರ್ಭ ಅವರನ್ನು ಹಿಂದೆ ಬೀಳುವಂತೆ ಮಾಡ್ದ್ದಿದ್ದೇ ಈ ಪ್ರಮಾದ. ಹಾಗಂತ ನಾನು ಮೆಥಡ್ ಪತ್ರಿಕೆಯ ಮೌಲ್ಯ ಅಲ್ಲಗಳೆಯುತ್ತಿಲ್ಲ. ಆದರೆ ಮೊದಲ ಸಾಮಾನ್ಯ ಪತ್ರಿಕೆಯ ಮಹತ್ವವನ್ನು ಪುಷ್ಟೀಕರಿಸುತ್ತ್ದ್ದಿದೇನೆ. ಪರೀಕ್ಷಾ ಯಶಸ್ಸು ಮೊದಲನೇ ಪತ್ರಿಕೆಯನ್ನೇ ಅವಲಂಬಿಸಿರುತ್ತದೆ. ಇದಕ್ಕೆ ಸ್ಪಷ್ಟ ಕಾರಣವೂ ಇದೆ.

ಉದಾಹರಣೆಗೆ ರಸಾಯನ ಶಾಸ್ತ್ರ ಮೆಥಡ್ ವಿಷಯ. ಈ ವಿಭಾಗದ 150 ಹುದ್ದೆಗೆ 5-10 ಸಾವಿರ ಅಭ್ಯರ್ಥಿಗಳು ಅರ್ಜಿ ಹಾಕಿರುತ್ತಾರೆ ಎಂದು ಭಾವಿಸೋಣ. ಇದರ 100 ಪ್ರಶ್ನೆಯಲ್ಲಿ ಶೇ 90ಕ್ಕೆ ಉತ್ತರಿಸುವ ಸಾಮರ್ಥ್ಯ 600 ರಿಂದ 800 ವಿದ್ಯಾರ್ಥಿಗಳಿಗೆ ಇ್ದ್ದದೇ ಇರುತ್ತದೆ. ಇಲ್ಲಿ ನೀವು ಎಷ್ಟೇ ಪ್ರಬಲ ಅಭ್ಯರ್ಥಿಯಾದರೂ 2 ಅಥವಾ 3 ಅಂಕಗಳಿಗಿಂತ ಹೆಚ್ಚು ಮುನ್ನಡೆ ಪಡೆಯುವುದು ಕಷ್ಟ.

ಆದರೆ ಇದೇ ಅಭ್ಯರ್ಥಿಗಳಲ್ಲಿ ಮೊದಲನೇ ಸಾಮಾನ್ಯ ಪತ್ರಿಕೆಯ 100 ಪ್ರಶ್ನೆಗಳ ಪೈಕಿ ಶೇ 90ಕ್ಕೆ ಉತ್ತರಿಸುವ ಸಾಮರ್ಥ್ಯ ಇರುವವರು ನೂರಿನ್ನೂರು ಸಿಗಬಹುದು. ಆಗ ನಿಮಗೆ ಪೈಪೋಟಿ ಕಡಿಮೆಯಾಗುತ್ತದೆ. ಇಲ್ಲಿ 10 ರಿಂದ 15 ಅಂಕಗಳ ಮುನ್ನಡೆ ಪಡೆಯಲು ಸಾಧ್ಯ. ಹಾಗಾಗಿ ಶಿಕ್ಷಕರಾಗುವ ನಿಮ್ಮ ಕನಸು ಈ ಪ್ರಶ್ನೆಪತ್ರಿಕೆಯನ್ನು ಅವಲಂಬಿಸಿರುತ್ತದೆ.
 
ಇದು ಬರೀ ಬಾಯ್ಮಾತಿನ ಲೆಕ್ಕಾಚಾರವಲ್ಲ. ಏಕೆಂದರೆ ತನ್ನ ಐಚ್ಛಿಕ ವಿಷಯದ ಪ್ರಾವೀಣ್ಯತೆ ಇರುವ ಕೆಲವರಿಗೆ, ಸಾಮಾನ್ಯ ಪತ್ರಿಕೆಯ ಮೊದಲ ಭಾಗವಾದ ಸೈಕಾಲಜಿಯ ಬಗ್ಗೆ ಆಳವಾದ ಜ್ಞಾನ ಇರುವುದಿಲ್ಲ. ಅವರು 33 ಪ್ರಶ್ನೆಗಳಲ್ಲಿ 8 ರಿಂದ 10 ಪ್ರಶ್ನೆಗಳಿಷ್ಟೇ ಉತ್ತರಿಸಬಲ್ಲರು.

ಇನ್ನು ಕೆಲವರಿಗೆ ಮೆಂಟಲೆಬಿಲಿಟಿ ನ್ಯೂನ್ಯತೆ. ಇಲ್ಲಿ 5 ರಿಂದ 6 ಪ್ರಶ್ನೆಗಳಿಗೇ ಸುಸ್ತು. ಒಂದಿಷ್ಟು ಮಂದಿಗೆ ಸಾಮಾನ್ಯ ಜ್ಞಾನ ಕಬ್ಬಿಣದ ಕಡಲೆ. 6- 7 ಪ್ರಶ್ನೆಗಳಿಗೆ ಉತ್ತರಿಸಿದರೆ ಅದೇ ದೊಡ್ಡದು. ಆದ್ದರಿಂದ ಈ ಪತ್ರಿಕೆಯನ್ನು ಸಮರ್ಥವಾಗಿ ಎದುರಿಸಬಲ್ಲ ಅಭ್ಯರ್ಥಿ ತನ್ನ ಪ್ರತಿಸ್ಪರ್ಧಿಗಳಿಗಿಂತ 15- 20 ಅಂಕಗಳ ಮುನ್ನಡೆ ಸಾಧಿಸುವ ಅವಕಾಶವಿದೆ.

ಮೆಥಡ್ ಗೊಂದಲ

ಈ ಪರೀಕ್ಷೆ ವಿಭಿನ್ನ ಪ್ರಕಾರಗಳಲ್ಲಿ ಸಂರಚಿತವಾಗಿದೆ. ಇಲ್ಲಿ ಸಾಮಾನ್ಯ ಪತ್ರಿಕೆ ಜೊತೆಗೆ ಎರಡು ಮೆಥಡ್ ಪತ್ರಿಕೆ ತೆಗೆದುಕೊಳ್ಳಲು ಅವಕಾಶವಿದೆ.  ಅಂದರೆ ಒಬ್ಬ ಅಭ್ಯರ್ಥಿ ಸಾಮಾನ್ಯ ಪತ್ರಿಕೆಯೊಂದಿಗೆ ಇತಿಹಾಸ ಮತ್ತು ಕನ್ನಡ, ಇಂಗ್ಲಿಷ್ ಮತ್ತು ಇತಿಹಾಸ, ಗಣಿತ ಮತ್ತು ರಸಾಯನಶಾಸ್ತ್ರ ಹೀಗೆ ಇಷ್ಟವಾದ ವಿಷಯ ಆರಿಸಿಕೊಳ್ಳಬಹುದು. ಈ ಎರಡರ ಪೈಕಿ ಪಡೆದ ಹೆಚ್ಚು ಅಂಕದ ಜೇಷ್ಠತೆ ಆಧಾರದ ಮೇಲೆ ಹುದ್ದೆಗೆ ಆಯ್ಕೆ ಮಾಡುತ್ತಾರೆ. ಬಹುಪಾಲು ವಿದ್ಯಾರ್ಥಿಗಳು ಇದನ್ನು ಸದವಕಾಶ ಎಂದು ತಿಳಿಯುತ್ತಾರೆ. ಆದರೆ ಇದು ಅತ್ಯಂತ ಅಪಾಯಕಾರಿಯಾದ ಅಂಶ.

ಉದಾಹರಣೆಗೆ ಒಬ್ಬ ಅಭ್ಯರ್ಥಿ ಇಂಗ್ಲಿಷ್ ಮತ್ತು ಇತಿಹಾಸ ಈ ಎರಡು ಮೆಥಡ್‌ಗೆ ಅರ್ಜಿ ಸಲ್ಲಿಸುತ್ತಾನೆ. ಎರಡರಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ನೌಕರಿ ಸಿಗಬಹುದು ಎಂದುಕೊಳ್ಳುತ್ತಾನೆ. ಇರುವ ಸೀಮಿತ ಅಧ್ಯಯನ ಅವಧಿಯನ್ನು ಎರಡು ಮೆಥಡ್‌ಗೆ ಹಂಚುತ್ತಾನೆ. ಆತನ ಮೂಲ ವಿಷಯ ಇಂಗ್ಲಿಷ್. ಆದರೆ ಜೊತೆಗೆ ಇತಿಹಾಸವನ್ನೂ ಓದಿದ್ದಾನೆ. ಇತಿಹಾಸದಲ್ಲಿ ಜ್ಞಾನವಿದ್ದರೂ ಪ್ರಾವಿಣ್ಯತೆ ಇಲ್ಲ.

 ಈತ ತನ್ನ ಮೂಲ ವಿಷಯ ಇಂಗ್ಲಿಷ್ ಅಧ್ಯಯನಕ್ಕೆ ಪೂರ್ಣ ಅವಧಿ ಮೀಸಲಿಟ್ಟಿದ್ದರೆ, ಈ ವಿಷಯದ ಬಲಿಷ್ಠ 600- 700 ಅಭ್ಯರ್ಥಿಗಳ ಜೊತೆ ಪೈಪೋಟಿ ನಡೆಸಬಹುದಾಗಿತ್ತು. ಈತ ಅರ್ಧ ಅವಧಿಯನ್ನು ಇತಿಹಾಸಕ್ಕೆ ಮೀಸಲಿಟ್ಟ ಕಾರಣ, ತನ್ನ ಮೂಲ ವಿಷಯದ ಪ್ರಬಲ ಅಭ್ಯರ್ಥಿಗಳ ಪಟ್ಟಿಯಿಂದ ಹೊರಬರುತ್ತಾನೆ.

ಏಕೆಂದರೆ ಕೇವಲ ಇಂಗ್ಲಿಷ್ ಮೆಥಡ್ ಅಧ್ಯಯನ ಮಾಡಿದವರು ಈತನನ್ನು ಸಹಜವಾಗಿಯೇ ಹಿಂದಿಕ್ಕುತ್ತಾರೆ. ಅದೇ ರೀತಿ ಈತ ಇತಿಹಾಸ ವಿಷಯದ ಮೂಲ ಅಭ್ಯರ್ಥಿಯಲ್ಲದ ಕಾರಣ ಅಲ್ಲೂ ಹಿಂದೆ ಬೀಳುತ್ತಾನೆ. ಹಾಗಂತ ಎರಡು ಮೆಥಡ್‌ಗಳಲ್ಲಿ ಪ್ರಾವಿಣ್ಯತೆ ಹೊಂದಿದ ಅಭ್ಯರ್ಥಿಗಳು ಇರಲು ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯವಲ್ಲ. ಆದರೆ, ಸಾವಿರಕ್ಕೆ ಅಂಥವರು ಒಬ್ಬಿಬ್ಬರು ಇರಬಹುದು. ನಾನು ಉದಾಹರಿಸಿದ್ದು ಇನ್ನುಳಿದವರ ಬಗ್ಗೆ.

ಅಸಡ್ಡೆ ಬೇಡ
ಸಾಮಾನ್ಯವಾಗಿ 34 ಅಂಕಗಳ ಜನರಲ್ ನಾಲೆಜ್ ಪ್ರಶ್ನೆಪತ್ರಿಕೆ ಬಗ್ಗೆ ಹೆಚ್ಚಿನವರಲ್ಲಿ ಗೊಂದಲ ಅಥವಾ ಅಸಡ್ಡೆ ಇರುತ್ತದೆ. ಯಾವುದನ್ನು ಬಿಡೋದು, ಯಾವುದನ್ನು ಓದೋದು ಎಂಬ ಗೊಂದಲದಿಂದ ಎಲ್ಲರೂ ಅಷ್ಟಕ್ಕಷ್ಟೇ ಓದುತ್ತಾರೆ. ಆದ್ದರಿಂದ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂಬುದು ನನ್ನ ಸಲಹೆ.

ಕೇವಲ 34 ಅಂಕಗಳಿಗೆ ನೀವು ಕಡ್ಡಾಯವಾಗಿ ಸಾಮಾನ್ಯ ಜ್ಞಾನದ ಪ್ರಶ್ನೆ ಪತ್ರಿಕೆಯ ಆಧಾರಸ್ತಂಭಗಳಾದ 18 ವಿಷಯಗಳನ್ನು ಅಧ್ಯಯನ ಮಾಡಲೇಬೇಕು. ಆದರೆ ನಿಮಗೆ ಇರುವುದು ಸೀಮಿತ ಕಾಲಾವಕಾಶ. ಆದ್ದರಿಂದ ಈ ಗೊಂದಲವನ್ನು ಮೆಟ್ಟಿ ನಿಲ್ಲಬೇಕು. ಆಯಾ ವಿಷಯಗಳ ಪರಿಣಿತರ ಸಹಾಯ ಪಡೆಯುವುದು ಒಳಿತು.

ಅಧ್ಯಯನ ಮಾದರಿ
ನಿಮ್ಮ ಮೆಥಡ್ ಪತ್ರಿಕೆ ಯುಪಿಎಸ್‌ಸಿ ಅಥವಾ ಕೆಪಿಎಸ್‌ಸಿ ಮಾದರಿಯ ನಾಲ್ಕು ಹಂತಗಳನ್ನು ಒಳಗೊಂಡಿರುವುದಿಲ್ಲ. ಬದಲಿಗೆ ಎಲ್ಲ 100 ಪ್ರಶ್ನೆಗಳು ನಾಲ್ಕನೇ ಹಂತದ ತಳ ಮತ್ತು ಪ್ರಸ್ತುತ ಮಾದರಿಯ ಪ್ರಶ್ನೆಗಳೇ ಆಗಿರುತ್ತವೆ. ಆದ್ದರಿಂದ ನೀವು  ಪರೀಕ್ಷೆಗೆ ಉಳಿದಿರುವ ದಿನಗಳನ್ನು ಸಾಮಾನ್ಯ ಪತ್ರಿಕೆ ಮತ್ತು ಮೆಥಡ್ ಪತ್ರಿಕೆಗೆ ಸಮಾನವಾಗಿ ಹಂಚಿಕೆ ಮಾಡಿಕೊಳ್ಳಿ. ಗಂಭೀರವಾಗಿ 16-18 ತಾಸು ಓದಿ.

ಪರೀಕ್ಷಾ ಕೊಠಡಿಯಲ್ಲಿ
ಸಾಕಷ್ಟು ಪರೀಕ್ಷಾರ್ಥಿಗಳು ಪರೀಕ್ಷಾ ಕೊಠಡಿಯಲ್ಲಿ ಸಮಯದ ಹೊಂದಾಣಿಕೆ ಹಂತದಲ್ಲಿ ಎಡವುತ್ತಾರೆ. ನೆಗೆಟಿವ್ ಮೌಲ್ಯಮಾಪನ ಇಲ್ಲದ ಕಾರಣ 100 ಪ್ರಶ್ನೆಗಳಿಗೆ ಉತ್ತರಿಸುವ ಮನಸ್ಥಿತಿಯಲ್ಲಿ ಇರುತ್ತಾರೆ. ಇದು ಸರಿ. ಆದರೆ 100 ಪ್ರಶ್ನೆಗಳಿಗೆ ಇರುವುದು ಬರೀ 120 ನಿಮಿಷ. ಅಂದರೆ ಪ್ರತಿ ಪ್ರಶ್ನೆಗೆ 1.2 ನಿಮಿಷ. ಈ ಅವಧಿಯನ್ನು ಕಾಳಜಿಯಿಂದ ಬಳಸಿಕೊಳ್ಳಬೇಕು.

ಬಹುತೇಕರು ಮೊದಲನೇ ಪ್ರಶ್ನೆಯಿಂದ ಉತ್ತರಿಸುವ ಪ್ರಯತ್ನದಲ್ಲಿ ಮಗ್ನರಾಗುತ್ತಾರೆ. ಮೊದಲೆರಡು ಪ್ರಶ್ನೆಗಳಿಗೆ ಉತ್ತರಿಸಿದ ನಂತರ 3 ಮತ್ತು 4ನೇ ಪ್ರಶ್ನೆಗಳು ಕಠಿಣವಾಗಿದ್ದರೆ ಅವುಗಳಿಗೆ 2 ಅಥವಾ 3ಕ್ಕಿಂತ ಹೆಚ್ಚು ನಿಮಿಷ ಬೇಕಾಗುತ್ತದೆ. ಆಗಲೂ ಅಂತಿಮವಾಗಿ ಉತ್ತರಿಸದೆ ಮುಂದಿನ ಪ್ರಶ್ನೆಗಳೆಡೆಗೆ ತೆರಳುತ್ತಾರೆ. ಈ ರೀತಿ 100 ಪ್ರಶ್ನೆಗಳನ್ನು ಮುಟ್ಟುವಷ್ಟರಲ್ಲಿ 25 ರಿಂದ 30ಕ್ಕೆ ಉತ್ತರಿಸದೆ ಬಿಟ್ಟಿರುತ್ತಾರೆ. ಅಷ್ಟರಲ್ಲಿ ಪರೀಕ್ಷೆ ಸಮಯವೂ ಮುಗಿಯಲು ಬಂದಿರುತ್ತದೆ.
 
ಸಮಯದ ಅಭಾವದಿಂದ ಬಿಟ್ಟ ಪ್ರಶ್ನೆಗಳಿಗೆ ಉತ್ತರಿಸುವ ಅವಸರದಲ್ಲಿ ಸೂಕ್ತ ತೀರ್ಮಾನಕ್ಕೆ ಬರಲಾಗದೆ ಉಳಿದ 25 ರಿಂದ 30 ಪ್ರಶ್ನೆಗಳಿಗೆ ಆತುರ ಆತುರವಾಗಿ ಉತ್ತರಿಸುತ್ತಾರೆ. ಇಂತಹ ಉತ್ತರಗಳು ಬಹುಪಾಲು ತಪ್ಪು ಫಲಿತಾಂಶ ನೀಡುತ್ತವೆ. ಇದರಿಂದ ಅಂಕ ಗಳಿಕೆಯಲ್ಲಿ ಹಿಂದೆ ಬೀಳುತ್ತಾರೆ.

ಈ ಸಮಸ್ಯೆಗೆ ಸುಲಭ ಪರಿಹಾರವೆಂದರೆ ನಿಗದಿತ 2 ತಾಸು ಅವಧಿಯನ್ನು 3 ಹಂತಗಳನ್ನಾಗಿ ಮಾಡಿಕೊಳ್ಳಬೇಕು. ಮೊದಲನೇ ಭಾಗದ 60 ನಿಮಿಷದಲ್ಲಿ ಮೊದಲನೇ ಪ್ರಶ್ನೆಯಿಂದ ಉತ್ತರಿಸ ಹೊರಡಬೇಕು. ನಿಮಗೆ ಖಚಿತವಾಗಿ ಗೊತ್ತಿರುವ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಬೇಕು. ಅವು ಕ್ರಮವಾಗಿಯೇ ಇರಬೇಕು ಎಂದೇನಿಲ್ಲ. 1, 3, 5, 9, 10, 23 ಹೀಗೆ ಕ್ರಮ ರಹಿತವಾಗಿದ್ದರೂ ಚಿಂತಿಸುವ ಅಗತ್ಯವಿಲ್ಲ. ಈ ಅವಧಿಯಲ್ಲಿ ಒಂದೇ ಬಾರಿಗೆ ಉತ್ತರಿಸಲಾಗದ ಪ್ರಶ್ನೆಯನ್ನು ಕೈಬಿಡಬೇಕು.

ಮುಂದೆ ಎರಡನೇ ಭಾಗಕ್ಕೆ 40 ನಿಮಿಷ ನಿಗದಿ ಮಾಡಿಕೊಳ್ಳಬೇಕು. ಮೊದಲು ಉತ್ತರಿಸದೆ ಇರುವ ಪ್ರಶ್ನೆಗಳನ್ನು ಮೇಲಿನಿಂದ ಉತ್ತರಿಸುವ ಪ್ರಯತ್ನ ಮಾಡಬೇಕು. ವಿಶ್ವಾಸ ಇದ್ದರೆ ಮಾತ್ರ ಪ್ರಶ್ನೆಗೆ ಉತ್ತರಿಸಬೇಕು, ಇಲ್ಲವಾದಲ್ಲಿ ಅವನ್ನು ಬಿಟ್ಟು ಮುಂದಿನ ಪ್ರಶ್ನೆಗಳತ್ತ ಹೋಗಬೇಕು.

ಮೂರನೇ ಭಾಗದ 20 ನಿಮಿಷ ಅವಧಿಯಲ್ಲಿ ಉಳಿದಿರುವ ಪ್ರತಿ ಪ್ರಶ್ನೆಯನ್ನು 3 ಸಲ ಪರಿಶೀಲಿಸಿ ಉತ್ತರಿಸಬೇಕು. ಇಂತಹ ಸಂದರ್ಭದಲ್ಲಿ 4- 5 ಪ್ರಶ್ನೆಗಳು ಉಳಿದುಕೊಂಡರೂ ಅಭ್ಯಂತರವಿಲ್ಲ. ಏಕೆಂದರೆ ಅವಕ್ಕೆ ನೀವು ಸುಲಭವಾಗಿ ಉತ್ತರಿಸಲು ಸಾಧ್ಯವಿರುವುದಿಲ್ಲ. ಹೀಗೆ ಸಮಯವನ್ನು ವಿಭಜಿಸಿಕೊಳ್ಳದಿದ್ದರೆ ತೊಂದರೆ ಕಟ್ಟಿಟ್ಟದ್ದು.
(ಲೇಖಕರ ಮೊ- 97424 08046)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT