ಕೊಲ್ಲೂರು (ಬೈಂದೂರು): ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ನೀಡುವ ಕೊಡುಗೆಗೆ ಗರಿಷ್ಠ ಮೌಲ್ಯವಿದೆ. ಅದನ್ನು ಪರಿಗಣಿಸಿ ಸಾಮರ್ಥ್ಯವಂತರು ನೆರವು ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಬಾಬು ಶೆಟ್ಟಿ ಹೇಳಿದರು.
ತಮಿಳುನಾಡಿನ ವಿದ್ಯಾಭಿಮಾನಿ ದಿನಕರನ್ ಮತ್ತು ನಾಗರತ್ನ ದಂಪತಿ ಅವರ ಪುತ್ರ ತಂಗವೇಲು ಸ್ಮರಣಾರ್ಥ 12 ಲಕ್ಷ ರೂಪಾಯಿ ಮೊತ್ತದಲ್ಲಿ ಕೊಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಿರ್ಮಿಸಿಕೊಟ್ಟಿರುವ ಕಟ್ಟಡವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.
ದಂಪತಿ ನೀಡಿದ ಒಂದು ಲಕ್ಷ ರೂಪಾಯಿ ಮೌಲ್ಯದ ಪೀಠೋಪಕರಣಗಳನ್ನು ತಾಲ್ಲೂಕು ಪಂಚಾಯಿತಿ ಸದಸ್ಯ ಕೆ. ರಮೇಶ ಗಾಣಿಗ ಶಾಲೆಗೆ ಹಸ್ತಾಂತರಿಸಿದರು. ತಾಲ್ಲೂಕು ಪಂಚಾಯಿತಿ ಅನುದಾನದಿಂದ ಶಾಲೆಗೆ ಆವರಣ ಮತ್ತು ಕಂಪ್ಯೂಟರ್ ಒದಗಿಸುವ ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯ ಶೇರೆಗಾರ್ ಅಧ್ಯಕ್ಷತೆ ವಹಿಸಿದ್ದರು. ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಲ್. ಎಸ್. ಮಾರುತಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಿ. ಸತ್ಯನಾರಾಯಣ ಅಡಿಗ, ಮಾಜಿ ಅಧ್ಯಕ್ಷ ಮಂಜುನಾಥ ಶೇರೆಗಾರ್, ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಣಯಕುಮಾರ ಶೆಟ್ಟಿ, ನಿವೃತ್ತ ಶಿಕ್ಷಕ ಅಪ್ಪಣ್ಣ ಕಾಮತ್, ಶ್ರೀನಿವಾಸ ಭಟ್, ಪ್ರೌಢಶಾಳೆ ಮುಖ್ಯಶಿಕ್ಷಕ ನಾಗರಾಜ ಭಟ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಂಗ್ಲೆ ನಾಗರಾಜ್, ಸಮೂಹ ಸಂಪನ್ಮೂಲ ವ್ಯಕ್ತಿ ಬಿ. ನಾಗರಾಜ್, ಶಿಕ್ಷಣ ಸಂಯೋಜಕ ರವಿರಾಜ ಶೆಟ್ಟಿ, ಎಸ್. ಎಂ. ಮಂಜುನಾಥ ಅತಿಥಿಗಳಾಗಿದ್ದರು. ಮುಖ್ಯೋಪಾಧ್ಯಾಯಿನಿ ಸುಮಿತ್ರಾ ಸ್ವಾಗತಿಸಿದರು. ರಾಘವೇಂದ್ರ ವಂದಿಸಿದರು. ಗೀತಾ ನಿರೂಪಿಸಿದರು. ದಾನಿ ದಂಪತಿಯನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.