`ಭಾರತ ಕಮ್ಯುನಿಸ್ಟ್ ರಾಷ್ಟ್ರವಾದರೆ ಹಾನಿ~
ವಾಷಿಂಗ್ಟನ್, ಆ. 23 - ಭಾರತವೇನಾದರೂ ಕಮ್ಯುನಿಸ್ಟ್ ರಾಷ್ಟ್ರವಾಗಿ ಮಾರ್ಪಟ್ಟರೆ ವಿಶ್ವದ ಇಡೀ ಹಿಂದುಳಿದ ರಾಷ್ಟ್ರಗಳಲ್ಲಿ ಶಾಂತಿಧ್ಯೇಯಕ್ಕೆ ತೀವ್ರ ಧಕ್ಕೆಯುಂಟಾಗುವುದೆಂದು ಅಮೆರಿಕದ ಅಧ್ಯಕ್ಷ ಕೆನೆಡಿ ನಿನ್ನೆ ಘೋಷಿಸಿದರು.
ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಭಾರತಕ್ಕೆ ಅಮೆರಿಕ ನೆರವು ನೀಡಿಕೆ ಕ್ರಮವನ್ನು ಸಮರ್ಥಿಸುತ್ತಾ ಹೀಗೆ ಹೇಳಿದರು. ಅಮೆರಿಕದಿಂದ ನೆರವು ಪಡೆಯುವ ರಾಷ್ಟ್ರವೊಂದು ಕಮ್ಯುನಿಸ್ಟ್ ರಾಷ್ಟ್ರವೊಂದರ ಜತೆ ಮಿಲಿಟರಿ ಅಥವಾ ಆರ್ಥಿಕ ವ್ಯವಹಾರ ನಡೆಸುವ ನೈತಿಕ ಹಕ್ಕು ಹೊಂದಿದೆಯೆ ಎಂದು ಪ್ರಶ್ನಿಸಿದಾಗ ಅವರು ಹೀಗೆ ಹೇಳಿದರು.
ನಾಯಿ ಮುಟ್ಟಿದ ಮಂಚ
ಭೋಪಾಲ್, ಆ. 23 - ಮಧ್ಯಪ್ರದೇಶದ ಉತ್ತರ ಭಾಗದಲ್ಲಿರುವ ಮಹಾಜನ ಪಂಗಡದ ಜನ ತಮ್ಮ ಹಾಸಿಗೆಯ ಮೇಲೆ ಮೊದಲು ನಾಯಿ ಮಲಗದ ಹೊರತು ತಾವು ಎಂದೂ ಮಲಗುವುದಿಲ್ಲ.
ತಮ್ಮ ಹಾಸಿಗೆಗಳ ಮೇಲೆ ಮೊದಲು ನಾಯಿ ಮಲಗಿದರೆ ಅನಂತರ ಅದರಲ್ಲಿ ಮಲಗುವ ಸ್ತ್ರೀ-ಪುರುಷರಿಗೆ ನಾಯಿಯ ಕಲ್ಯಾಣ ಗುಣಗಳು ಅಂದರೆ ಗಂಡಸರಿಗೆ ಚಚ್ಚರ, ಜಾಗರೂಕತೆ ಹಾಗೂ ಹೆಂಗಸರಲ್ಲಿ ನಿಷ್ಠೆ ಬರುವುದೆಂಬ ನಂಬಿಕೆ ಆ ಜನರಿಗಿದೆ. ಅಲ್ಲದೆ ಶಬ್ದಕೋಶ ರಚನೆ ತಂಡವೊಂದು ನಡೆಸಿದ ಸಮೀಕ್ಷೆಯೊಂದರಲ್ಲಿ ಈ ಅಪೂರ್ವ ಪದ್ಧತಿ ಬೆಳಕಿಗೆ ಬಂದಿತು.