ಭಾರತ- ಪಾಕ್ ಮಾತುಕತೆ ಆರಂಭ
ರಾವಲ್ಪಿಂಡಿ, ಡಿ. 27 -ಭಾರತ, ಪಾಕಿಸ್ತಾನಗಳ ನಡುವೆ ಇತ್ಯರ್ಥವಾಗದುಳಿದಿರುವ ಕಾಶ್ಮೀರ ಮತ್ತು ಇತರ ಸಮಸ್ಯೆಗಳ ಗೌರವಯುತ, ಸಮಾನ ಇತ್ಯರ್ಥಕ್ಕೆ ಬೃಹತ್ ಪ್ರಮಾಣದ ಸ್ನೇಹಯುತ ಸಹಕಾರದ ಆಧಾರದ ಮೇಲೆ ಹೊಸ ದೃಷ್ಟಿಯ ಪ್ರಯತ್ನ ಅಗತ್ಯವೆಂದು ಭಾರತ-ಪಾಕಿಸ್ತಾನ ಸಚಿವ ಮಟ್ಟದ ಮಾತುಕತೆಗೆ ಭಾರತೀಯ ನಿಯೋಗದ ನಾಯಕರಾದ ಸರ್ದಾರ್ ಸ್ವರಣ್ ಸಿಂಗ್ ಇಂದು ಕರೆಯಿತ್ತರು.
ಮಾತುಕತೆ ನಡೆಸುವಾಗ ಭಾರತ - ಪಾಕಿಸ್ತಾನ್ ಉಪಖಂಡದಲ್ಲಿನ ವಾಸ್ತವಿಕ ಸ್ಥಿತಿಗತಿಗಳನ್ನೂ, ಎರಡೂ ದೇಶಗಳೂ ಸ್ವತಂತ್ರವಾದಾಗಿನಿಂದ ಈಚೆಗೆ ಉಂಟಾಗಿರುವ ಬೆಳವಣಿಗೆಯನ್ನೂ ಗಮನಕ್ಕೆ ತೆಗೆದು ಕೊಳ್ಳಬೇಕೆಂದು ಸರ್ದಾರ್ ಸ್ವರಣ್ ಸಿಂಗ್ ಹೇಳಿದರು.